ಬಿಡುವಿರದೆ ಸಾಗಿದ್ದಾರೆ ಜನ ನೂರುದಾರಿಗಳಲ್ಲಿ
ಆದರೂ ಹೆಜ್ಜೆಗಳ ಗುರುತು ಮೂಡಲಿಲ್ಲ
ಎಲ್ಲಿ ಹೋಗಲಿ ಈ ಸೊಕ್ಕುಸಂದಣಿಯಲ್ಲಿ
ಮರಳಿದೆನು ಮನೆಗೆ, ಎಲ್ಲಿಗೂ ಹೋಗಲಿಲ್ಲ
ಮಾರುಕಟ್ಟೆಯಲಿ ಅನುಗಾಲ ಜನರ ಪರಸ್ಪರ ಭೇಟಿ
ಆದರೂ ಮನಸುಗಳು ಅನ್ಯೋನ್ಯ ಬೆಸೆಯಲಿಲ್ಲ
ಏನಿತ್ತು ಸುಲಲೀತ ಒಲವಿರದ ಜಗದಲ್ಲಿ
ಮರಳಿದೆನು ಮನೆಗೆ, ಎಲ್ಲಿಗೂ ಹೋಗಲಿಲ್ಲ
ಉರಿವ ದಿನಚರಿಯಿಂದ ಘಾಸಿಯಾಯಿತು ಹೃದಯ
ಆದರೂ ಹುಣ್ಣಿಮೆಯ ಬೆಳಕನಾರೂ ಕಾಣುತಿಲ್ಲ
ಸಮಯವೇ ಇರಲಿಲ್ಲ ಲೆಕ್ಕದೀಲೋಕದಲಿ
ಮರಳಿದೆನು ಮನೆಗೆ, ಎಲ್ಲಿಗೂ ಹೋಗಲಿಲ್ಲ
ಕ್ಷಣಕ್ಷಣಕೂ ಮಾತುಗಳ ವಿನಿಮಯಕೆ ಇಲ್ಲ ಮಿತಿ
ಯಾರೊಳಗೂ ಸಹಮತಿಯು ಮೂಡುತಿಲ್ಲ
ಹಾಡುವುದು ಹೇಗಿಲ್ಲಿ ದನಿಗಳಬ್ಬರದಲ್ಲಿ
ಮರಳಿದೆನು ಮನೆಗೆ ಎಲ್ಲಿಗೂ ಹೋಗಲಿಲ್ಲ
ಬಿಸಿಲ ತಾಪಕೆ ನಾಚಿ ಮುಸುಕಿನಲಿ ಮುಚ್ಚಿರಲೇ
ನನೆಯೊಳಗೆ ಮರುಳ ನಾನಾದೆ ಒಂಟಿ
ತೆರೆದಿಟ್ಟೆ ಬಾಗಿಲನು, ಒಳಕರೆದೆ ಮಂದಿಯನು
ಸೇರಿ ಸುರ ಸಾರಿದೆವು, ಯಾರನೂ ಮರೆಯಲಿಲ್ಲ
————— ಕಮಲಾಕರ ಕಡವೆ