ಫ್ರಾಂಝ್ ಕಾಫ್ಕಾ – ಕಾಯಿದೆಯ ಎದುರು


ಕನ್ನಡಕ್ಕೆ: ಕಮಲಾಕರ ಕಡವೆ

 

ಕಾಯಿದೆಯ ಎದುರು ಒಬ್ಬ ದ್ವಾರಪಾಲಕ. ಅವನ ಎದುರು ಒಬ್ಬ ಹಳ್ಳಿಮನಷ ಬರುತ್ತಾನೆ ಮತ್ತು ಕಾಯಿದೆಯ ಎದುರು ಹೋಗಲು ಅನುಮತಿ ಬೇಡುತ್ತಾನೆ. ಆದರೆ ದ್ವಾರಪಾಲಕ ತತ್ ಕ್ಷಣ ಒಳಹೋಗಲು ಅನುಮತಿ ನೀಡಲಾಗದು ಅನ್ನುತ್ತಾನೆ. ಆ ಹಳ್ಳಿಮನಷ ಕೊಂಚ ಯೋಚಿಸಿ, ಆ ಮೇಲೆ ಒಳಹೋಗಲಾದೀತೆ ಎಂದು ವಿಚಾರಿಸುತ್ತಾನೆ. “ಆದೀತು, ಆದರೆ ಈಗಲ್ಲ”, ಅನ್ನುತ್ತಾನೆ ದ್ವಾರಪಾಲಕ. ಬಾಗಿಲು ಎಂದಿನಂತೆ ತೆರೆದೇ ಇದ್ದದ್ದರಿಂದ, ದ್ವಾರಪಾಲಕ ಪಕ್ಕಕ್ಕೆ ಸರಿದಂತೇ, ಆ ಹಳ್ಳಿಮನಷ ಬಗ್ಗಿ ಒಳಗಿನತ್ತ ನೋಡುತ್ತಾನೆ. ಇದನ್ನು ಗಮನಿಸಿದ ದ್ವಾರಪಾಲಕ, ನಕ್ಕು ಅವನಿಗೆ ಹೇಳುತ್ತಾನೆ, “ನಿನಗೆ ಹಾಗನ್ನಿಸಿದರೆ ನನ್ನ ಮಾತಿಗೆ ಪ್ರತಿಯಾಗಿ ಒಳಹೋಗಲು ಪ್ರಯತ್ನ ಮಾಡು. ಆದರೆ ನೆನಪಿರಲಿ, ನಾನು ಬಲಿಷ್ಠನಿದ್ದೇನೆ. ಮತ್ತು ನಾನು ದ್ವಾರಪಾಲಕರುಗಳಲ್ಲೆಲ್ಲಾ ಅತಿ ಸಣ್ಣಗಿನವ. ಕೋಣೆಯಿಂದ ಕೋಣೆಗೆ ದ್ವಾರಪಾಲಕರು ಎದುರಾಗುತ್ತಾರೆ ಮತ್ತು ಒಬ್ಬೊಬ್ಬರೂ ಮೊದಲಿನವರಿಗಿಂತ ಹೆಚ್ಚು ಬಲಿಷ್ಠರು. ಮೂರನೇ ದ್ವಾರಪಾಲಕನವರೆಗೆ ತಲುಪಿದರೂ ಸಾಕು, ಆತ ಎಷ್ಟು ಭಯಾನಕನಿದ್ದಾನೆ ಎಂದರೆ, ನಾನೂ ಸಹ ಅವನನ್ನು ಕಣ್ಣೆತ್ತಿ ನೋಡಲು ಹೆದರುತ್ತೇನೆ.” ಈ ಬಗೆಯ ತಡೆಗಳನ್ನು ಹಳ್ಳಿಮನಷ ಎಣಿಸಿರಲಿಲ್ಲ; ಕಾಯಿದೆ ಎಲ್ಲರಿಗೂ ಎಂದಿಗೂ ಎಟಕುವಂತಿರಬೇಕಲ್ಲವೇ ಎಂದುಕೊಳ್ಳುತ್ತಾನೆ ಆತ, ಆದರೆ ಈಗ ಕಡಕ್ಕು ಕೋಟು ತೊಟ್ಟು ಕೂತಿರುವ ಆ ದ್ವಾರಪಾಲಕನನ್ನ ಹತ್ತಿರದಿಂದ ನೋಡಿದಂತೆ, ಅವನ ಉದ್ದನ ಚೂಪು ಮೂಗು ಮತ್ತು ತೆಳ್ಳನ ಕಪ್ಪನೆಯ ನೀಳ ಗಡ್ಡವನ್ನು ನೋಡಿದಂತೆ, ಅನುಮತಿ ಸಿಗುವವರೆಗೆ ಕಾಯುವುದೇ ಲೇಸು ಎಂದು ನಿರ್ಧರಿಸುತ್ತಾನೆ. ದ್ವಾರಪಾಲಕ ಅವನಿಗೆ ಒಂದು ಕುರ್ಚಿ ಕೊಟ್ಟು ಬಾಗಿಲ ಬದಿಯಲ್ಲಿ ಕೂರಗೊಡುತ್ತಾನೆ. ಅಲ್ಲಿ ಅವನು ದಿನಾನುದಿನ ವರ್ಷಗಳಕಾಲ ಕೂತಿರುತ್ತಾನೆ. ಬಹಳ ಸಲ ಅವನು ಒಳಹೋಗಲು ಪ್ರಯತ್ನ ಮಾಡುತ್ತಾನೆ, ದ್ವಾರಪಾಲಕನಿಗೆ ಬೇಡಿ ಬೇಡಿ ಕಾಡುತ್ತಾನೆ. ಅವನೊಡನೆ ಆಗೀಗ ದ್ವಾರಪಾಲಕ ಚಿಕ್ಕಪುಟ್ಟ ಸಂಭಾಷಣೆ ನಡೆಸುತ್ತಾನೆ, ಅವನ ಮನೆ ಮತ್ತಿತರ ವಿಷಯ ವಿಚಾರಿಸುತ್ತಾನೆ. ಆದರೆ ಯಾವಾಗಲೂ ಅವು ನಿರಾಸಕ್ತ ಪ್ರಶ್ನೆಗಳಾಗಿರುತ್ತವೆ, ದೊಡ್ಡ ದೊಡ್ಡ ಸಾಹೇಬರುಗಳು ಕೇಳುವಂತೆ ಮತ್ತು ಯಾವಾಗಲೂ ಅವು ಒಳಹೋಗಲು ಅನುಮತಿ ಇಲ್ಲ ಅನ್ನುವಲ್ಲಿ ಕೊನೆಯಾಗುತ್ತವೆ. ಹಳ್ಳಿಮನಷ ತಾನು ಪ್ರಯಾಣನಿಮಿತ್ತ ಜತೆಗೆ ತಂದ ಏನೆಲ್ಲವನ್ನೂ ತ್ಯಾಗಮಾಡಿ ದ್ವಾರಪಾಲಕನಿಗೆ ಲಂಚವಾಗಿ ಕೊಡುತ್ತಾನೆ. ಪ್ರತಿ ಸಲವೂ ದ್ವಾರಪಾಲಕ ಅವುಗಳನ್ನು ಸ್ವೀಕರಿಸುತ್ತ ಹೇಳುತ್ತಾನೆ, “ಇವನ್ನೆಲ್ಲ ನಾನು ತೆಗೆದುಕೊಳ್ಳುತ್ತಿರುವುದೇಕೆಂದರೆ ನಿನಗೆ ಎಲ್ಲವನ್ನೂ ಮಾಡಿದ ತೃಪ್ತಿ ಇರಲಿ ಎನ್ನುವ ಮಾತ್ರಕ್ಕೆ.” ಎಷ್ಟೋ ವರ್ಷಗಳವರೆಗೆ ಸತತವಾಗಿ ಆ ಹಳ್ಳಿಮನಷ ದ್ವಾರಪಾಲಕನ ಮೇಲೆ ತನ್ನ ನೋಟ ನೆಡುತ್ತಾನೆ. ಅವನು ಇತರ ದ್ವಾರಪಾಲಕರನ್ನು ಮರೆಯುತ್ತಾನೆ, ಈ ಮೊದಲಿನವನೇ ಆತನಿಗೆ ಕಾಯಿದೆಯನ್ನು ತಲುಪಲು ತನಗಿರುವ ಏಕಾಕಿ ಕಂಟಕವಾಗಿ ಕಾಣುತ್ತಾನೆ. ಅವನು ತನ್ನ ದುರಾದೃಷ್ಟವನ್ನು ಹಳಿಯುತ್ತಾನೆ, ಮೊದಮೊದಲ ವರ್ಷಗಳಲ್ಲಿ ದೊಡ್ಡ ದನಿಯಲ್ಲಿ, ಆದರೆ ವಯಸ್ಸಾದಂತೆ ಒಳಗೊಳಗೇ ವಟವಟಗುಟ್ಟುತ್ತಾನೆ. ಮಕ್ಕಳಂತ್ತಾಡತೊಡಗುತ್ತಾನೆ. ಮತ್ತು, ದ್ವಾರಪಾಲಕನನ್ನು ಇಷ್ಟೆಲ್ಲ ವರ್ಷಗಳವರೆಗೆ ಸತತ ಧ್ಯಾನವಿಟ್ಟು ಕಾಣುತ್ತ ಕುಳಿತಿರುವ ಅವನಿಗೆ, ದ್ವಾರಪಾಲಕನ ಕೋಟಿನ ಕಾಲರಿನ ಮೇಲೆ ಕುಳಿತ ಹೇನು ಕೂಡ ಪರಿಚಯವಾಗಿಬಿಟ್ಟಿರುವುದರಿಂದ, ಆ ಹೇನುಗಳಿಗೂ ಮೊರೆ ಇಡುತ್ತಾನೆ ದ್ವಾರಪಾಲಕನ ಮನಪರಿವರ್ತನೆಗೆ ಬೇಡಿಕೊಂಡು. ಹೀಗೇ ಕಾಲ ಸರಿದು ಅವನ ದೃಷ್ಟಿಯೂ ಮಂಜಾಗತೊಡಗುತ್ತದೆ. ಅವನಿಗೆ ಜಗವೇ ಕರಾಳವಾಗುತ್ತಿದೆಯೇ ಅಥವಾ ತನ್ನ ಕಣ್ಣುಗಳೇ ಮೋಸಮಾಡುತ್ತಿವೆಯೇ ಅರಿವಿಗೆ ಬರುವುದಿಲ್ಲ. ಹಾಗಿದ್ದೂ ಅಂಧಕಾರದಲ್ಲಿ ಮುಳುಗಿದ್ದಾತನಿಗೆ ಸದಾ ತೆರೆದಿರುತ್ತಿದ್ದ ಕಾಯಿದೆಯ ಬಾಗಿಲೆಡೆಯಿಂದ ಎಡೆಬಿಡದೇ ಸೂಸುತ್ತಿರುವ ಪ್ರಭೆಯೊಂದು ಅರಿವಿಗೆ ಬರುತ್ತದೆ. ವಯಸ್ಸು ತುಂಬಿಬಂದಿರುವ ಅವನಿಗಿನ್ನು ಹೆಚ್ಚು ಬಾಳು ಉಳಿದಿಲ್ಲ.  ಸಾಯುವ ಮೊದಲು, ಅವನ ಈವರೆಗಿನ ಎಲ್ಲ ಕಟು ಅನುಭವಗಳೂ ಒಟ್ಟಾಗಿ ಅವನ ಒಳಗಿನಿಂದ ಇಲ್ಲಿಯವರೆಗೆಂದೆಂದೂ ಕೇಳಿರದ ಒಂದು ಪ್ರಶ್ನೆಯನ್ನು ಎತ್ತುತ್ತವೆ. ಸ್ವತಃ ಏಳಲೂ ಆಗದ ಸ್ಥಿತಿಯಲ್ಲಿರುವ ಅವನು ಕೈಬೀಸಿ ದ್ವಾರಪಾಲಕನನ್ನು ಬಳಿಗೆ ಕರೆಯುತ್ತಾನೆ. ಹಳ್ಳಿಮನಷನ ಆಕೃತಿಯೂ ಕುಬ್ಜವಾಗಿಬಿಟ್ಟಿರುವುದರಿಂದ ಅವನ ಮಾತನ್ನು ಕೇಳಲು ದ್ವಾರಪಾಲಕ ಬಗ್ಗಬೇಕಾಗುತ್ತದೆ. “ಈಗೇನು ಕೇಳಬೇಕಾಗಿ ಬಂದಿದೆ ನಿನಗೆ”, ದ್ವಾರಪಾಲಕ ಸಿಡಿಮಿಡಿ ಮಾಡುತ್ತಾನೆ, “ಸಮಾಧಾನವೇ ಇಲ್ಲವಲ್ಲ ನಿನಗೆ”. “ಎಲ್ಲರಿಗೂ ಕಾಯಿದೆಯ ಫಾಯಿದೆ ಬೇಕಾಗಿಯೇ ಇರುತ್ತದಾದರೂ, ಇಷ್ಟೆಲ್ಲ ವರ್ಷಗಳಲ್ಲಿ ನನ್ನನುಳಿದು ಬೇರೆ ಯಾರೂ ಕೂಡ ಒಳಹೋಗಲೆಂದು ಬೇಡಿಕೊಂಡು ಈ ಬಾಗಿಲ ಬಳಿ ಬರಲಿಲ್ಲವಲ್ಲ, ಯಾಕೆ?” ಎಂದು ಕೇಳುತ್ತಾನೆ ಆ ಹಳ್ಳಿಮನಷ. ಅವನ ಕೊನೆ ಘಳಿಗೆ ಬಂದಿರುವುದನ್ನ ಅರಿತ ದ್ವಾರಪಾಲಕ, ಇಂದ್ರಿಯಗಳೆಲ್ಲ ಜಡವಾಗುತ್ತಿರುವ ಅವನ ಕಿವಿಯ ಬಳಿ ಜೋರಾಗಿ ಕಿರುಚುತ್ತಾನೆ, “ಬೇರೆ ಯಾರೂ ಈ ಬಾಗಿಲ ಮೂಲಕ ಒಳಹೋಗುವಂತಿರಲಿಲ್ಲ, ಏಕೆಂದರೆ ಇದು ನಿನಗೊಬ್ಬನಿಗಾಗಿಯೇ ಮಾಡಿದ್ದ ಬಾಗಿಲಾಗಿತ್ತು. ಇನ್ನು ನಾನು ಈ ಬಾಗಿಲನ್ನು ಮುಚ್ಚುತ್ತೇನೆ”.

 

ವಾಸ್ತವವೆಂದರೆ ವಾಸ್ತವವೇ?

ವಾಸ್ತವ ಎನ್ನುವುದು ಮಾಯೆ ಎಂದು ನಂಬುವುದಿದೆ. ಅದೊಂದು ಆದಿಭೌತಿಕ ನಿಲುವು. ಆದರೆ ಭೌತಿಕ ನೆಲೆಯಲ್ಲೂ ಕೂಡ ಈ ಕುರಿತು ಅದೇ ತರಹದ ನೋಟ ನಾವು ಕಾಣುತ್ತೇವೆ. ಅಂದರೆ, ವಾಸ್ತವವಾಗಿ ವಾಸ್ತವವೆಂದರೆ ಕಥನಗಳ ಮೂಲಕ ನಾವು ಕಟ್ಟಿಕೊಳ್ಳುವ ನಂಬಿಕೆಗಳು ಎಂಬರ್ಥದಲ್ಲಿ. ನಾವು ಕಾಣುವುದೆಲ್ಲ ಇರುವಹಾಗೇ ನಮಗೆ ಅರಿವಿಗೆ ಬರುತ್ತದೆ ಎನ್ನುವುದು ಕಲ್ಪನೆಯೇ ಸರಿ. ಸಮಾಜ ಜೀವಿಗಳಾದ ನಮಗೆ, ಸಾಮಾಜಿಕ ಕಥನಗಳು ಕಟ್ಟಿಕೊಟ್ಟಿರುವ ತಿಳಿವಿನ ಪ್ರಕಾರಗಳ ಹೊರತು ಇನ್ನೇನೂ ಅರಿವಿನ ಸಾಧ್ಯತೆ ಇಲ್ಲ. ಹಾಗಾಗಿಯೇ ಭಾಷೆಯ ಹೊರಗೆ ಏನೂ ಇಲ್ಲ ಎಂದು ಕೆಲವರ ಅಂಬೋಣ.

ಇದನ್ನು ನಿಧಾನವಾಗಿ ನೋಡೋಣ. ನನ್ನ ಕಣ್ಣ ಮುಂದೆ ಬಾಳೆಹಣ್ಣಿದೆ. ಆ ಬಾಳೆ ಹಣ್ಣು ವಾಸ್ತವವೋ, ಕಥನವೋ? ಭೌತಿಕವಾಗಿ ಬಾಳೆಹಣ್ಣಿರುವುದು ಪ್ರಶ್ನಾತೀತ. ಆದರೆ ಅದು ಬಾಳೆ ಹಣ್ಣು ಎಂಬ ನನ್ನೊಳಗಿನ ಅರಿವು ಹಾಗು ಆ ಭೌತಿಕ ವಸ್ತುವಿನ ನಡುವೆ ಸಾಮ್ಯವಿದ್ದರೆ ಅದಕ್ಕೆ ಆ ವಸ್ತುವಿನ ಬಗ್ಗೆ ನಾನು ಆಂತರಿಸಿಕೊಂಡ ಸಾಮಾಜಿಕ ಕಥನಗಳೇ ಕಾರಣ. ಯಾಕೆಂದರೆ ಆ ಭೌತಿಕ ವಸ್ತು ನನಗೆ ಒಂದು ವಿಶಿಷ್ಟ ಬಗೆಯ ಹಣ್ಣಾಗಿ, ವಿಶಿಷ್ಟ ಗುಣಗಳೊಂದಿಗೆ, ವಿಶಿಷ್ಟ ಉಪಯೋಗಗಳಿರುವ ವಸ್ತುವಾಗಿ ಅರಿವಾಗುತ್ತಿದೆ. ಈ ಎಲ್ಲ (ಇಂತಹ ಎಲ್ಲ) ತಿಳಿವು ಇರದಿದ್ದರೆ ಆ ವಸ್ತು ಏನೊಂದೂ ಆಗಲಾರದು. (ಅದು ವಸ್ತು ಎಂದು ತಿಳಿವುದರ ಪ್ರಕ್ರಿಯೆಯೂ ಹೀಗೆಯೇ ಇರುತ್ತದೆಯಾಗಿ). ಅಂದರೆ, ಬಾಳೆ ಹಣ್ಣು ಬಾಳೆ ಹಣ್ಣಾಗಿರುವುದು ಅದರದ್ದೇ ಆದ ಗುಣಲಕ್ಷಣಗಳಿಂದಾದರೂ, ಅದು ನನಗೆ ಬಾಳೆಹಣ್ಣಾಗುವುದು ಅದರ ಹೊರತಾದ ನನ್ನ ಸಾಮಾಜಿಕ/ಸಾಂಸ್ಕೃತಿಕ ಪ್ರಜ್ನಾವಲಯದ ಮೂಲಕವೇ.

ಹೀಗೆ ಶುರುಮಾಡಿದರೆ ಕಥನಗಳು ಹೇಗೆ ನಮ್ಮ ನಿತ್ಯ ವ್ಯವಹಾರಗಳನ್ನು ನಿರ್ಮಿಸುತ್ತವೆ ಎಂದು ಅರಿವಿಗೆ ಬರುತ್ತದೆ. Social Text ಎಂಬ ಪತ್ರಿಕೆಯಲ್ಲಿ ನಡೆದ ಗಫಲಾ ಒಂದರಲ್ಲಿ ಸೋಕಲ್ ಎಂಬ ಭೌತ ಶಾಸ್ತ್ರಜ್ನನು ಈ ಥರಹದ ವಿಚಾರಗಳನ್ನು ಸುಳ್ಳು ಎಂದು ಸಾಧಿಸಲು ಆ ಪತ್ರಿಕೆಯನ್ನೇ ವಿಡಂಬಿಸುವ ಒಂದು ಪ್ರಯೋಗ ಮಾಡಿದ. (Sokal affair ಎಂದು ಗೂಗಲನಲ್ಲಿ ಹುಡುಕಿದರೆ ವಿವರಗಳು ಸಿಗುತ್ತವೆ). ವಾಸ್ತವ ಎನ್ನುವುದು ಸಾಮಾಜಿಕ ಕಥನ ಎನ್ನುವವರು ತನ್ನ ಹತ್ತನೇ ಮಹಡಿಯ ಮನೆಯ ಬಾಲ್ಕನಿಯಿಂದ ಹೊರ ಜಿಗಿದು ವಾಸ್ತವದ ಸತ್ಯತೆಯನ್ನು ಪರೀಕ್ಷಿಸಬಹುದು ಎಂದು ವ್ಯಂಗವಾಗಿ ಈ ವಿಚಾರವನ್ನು ಟೀಕಿಸಿದ. ಅವನು ಹೇಳುವುದು ಸರಿ. ಸೃಷ್ಟಿಯ ಆಗುಹೋಗುಗಳನ್ನು ಸಮಾಜ ಸೃಷ್ಟಿಸಿದೆ ಎನ್ನುವುದು ಸರಿ ಅಲ್ಲ. ಆದರೆ ಅವನು ಮುಗ್ಗರಿಸುವುದು ಇಲ್ಲಿಯೇ. ಸಾಮಾಜಿಕ ಕಥನಾವಾದ ಎನ್ನುವುದೆಂದರೆ, ಸ್ಥಿತಿಯ ಕುರಿತಾದ ನಮ್ಮ ಜ್ನಾನ ಕಥನವೆಂದೇ ಹೊರತೂ, ಸ್ಥಿತಿಯೇ ಕಥನವೆಂದಲ್ಲ. ಗುರುತ್ವಾಕರ್ಷಣ ಬಲದ ಕುರಿತು ನಮ್ಮ ಜ್ನಾನ ಕಥನವೆಂದೇ ಹೊರತೂ, ಆ ಬಲವೇ ಕಥನವೆಂದಲ್ಲ.

ಜ್ನಾನದ ಕಟ್ಟುಕೊಳ್ಳುವಿಕೆಯ ಈ ನಮ್ಮ ವ್ಯವಹಾರವನ್ನು ನಾವು ಸಾಮಾನ್ಯವಾಗಿ ನಿರ್ಲಕ್ಷಿಸಿ ಅದನ್ನು ನಿತ್ಯಸತ್ಯವೆಂದು ಸ್ವೀಕರಿಸಿಬಿಡುವುದು ಹಲವು ಬಗೆಯ ಗೊಂದಲಗಳನ್ನು ಹಾಗೂ ತೊಂದರೆಗಳನ್ನು ಹುಟ್ಟಿಸುತ್ತದೆ. ಇದು ಮಾನವ, ಮಾನವನ ಕುರಿತಾಗಿ ಕಟ್ಟಿಕೊಳ್ಳುವ ಜ್ನಾನಗಳಲ್ಲಿ ತನ್ನ ವಿಪರೀತಗಳನ್ನು ಪ್ರದರ್ಶಿಸುತ್ತದೆ. ಉದಾಹರಣೆಯಾಗಿ ಭಾರತದಲ್ಲಿ ಪಾಕಿಸ್ತಾನದ ಬಗ್ಗೆ ಇರುವ ನಂಬಿಕೆಗಳನ್ನೇ ನೋಡಬಹುದು. ಸಾಮನ್ಯವಾಗಿ ಇದು ನೆಗೆಟಿವ್ ಆದ ನಂಬಿಕೆ. ಅಂದರೆ ಪಾಕಿಸ್ತಾನಿಗಳು ಹಾಗೆ ಹೀಗೆ ಎಂಬಲ್ಲಿ, ಯಾರು ಯಾರು ಹಾಗೆ, ಎಲ್ಲರೂ ಹಾಗಿರುತ್ತಾರೆಯೇ ಎಂದೆಲ್ಲ ಯೋಚಿಸದೇ ಒಂದು ತರದ ಸಾರ್ವತ್ರಿಕ ರೂಪಿನಲ್ಲಿ ನಾವು ಪಾಕಿಸ್ತಾನ ಹಾಗೂ ಅಲ್ಲಿಯ ಜನರನ್ನು ಕಲ್ಪಿಸಿಕೊಂಡು ಬಿಡುತ್ತೇವೆ. ಹಾಗೆಯೇ, ವಸಾಹತುಶಾಹಿಯ ಸಮಯದಲ್ಲಿ ಭಾರತೀಯರ ಬಗ್ಗೆ ಬ್ರಿಟೀಷರಿಗಿದ್ದ ಕೆಲವು ನಂಬಿಕೆಗಳು. ಎಡ್ವರ್ಡ ಸಾಯಿದ್ ಅನ್ನುವಂತೇ ಹೀಗೆ ಮಾಡುವಾಗ ಆಗುವುದೇನೆಂದರೆ, ಮೊದಲು ಸಿಂಹ ಹೀಗಿರುತ್ತದೆ ಎಂಬ ವಿವರಣೆ ಯಾವುದೋ ಒಂದು ಅನುಭವದ ಮೇಲೆ ಹುಟ್ಟಿ ಆಮೇಲೆ, ಹೀಗಿರುವುದೆಲ್ಲ ಸಿಂಹವೇ, ಸಿಂಹ ಹೀಗೇ ಇರಬೇಕು, ನಮಗೆ ಗೊತ್ತಿರುವುದೋಂದೇ ಸಿಂಹ, ಇಲ್ಲದಿದ್ದರೆ ಅದು ಸಿಂಹವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಬರುತ್ತದೆ.

ದಿನದಿನದ ವ್ಯವಹಾರಗಳಲ್ಲಿ ಕೂಡ ನಾವು ಕಥಿತ ಜ್ನಾನವನ್ನು ಇತ್ಯಾತ್ಮಕ ಜ್ನಾನವೆಂದು ಸ್ವೀಕರಿಸಿ ಗೊಂದಲದೊಳಗಿರುತ್ತೇವೆ. ಅಂದರೆ, ನಮ್ಮ ನಂಬಿಕೆಗಳು ಮೇಲ್ನೋಟಕ್ಕೆ ಸತ್ಯ ಅನ್ನಿಸಿದರೂ, ಅವು ಸಾಂದರ್ಭಿಕ ಸಾಮಾಜಿಕ ಅಧಿಕಾರಗಳ ಜಾಲದಲ್ಲಿ ಹುಟ್ಟುಕೊಂಡ ಐಡಿಯಾಲಜಿಗಳನ್ನವಲಂಬಿಸಿರುತ್ತವೆ.

ಕಮಲಾಕರ

ಹುಚ್ಚು ಕನಸಿನ ತುಣುಕು

 

image from: google images

 

 

 

 

 

 

 

ಹೊಳೆಯಿಲ್ಲ ಬೆಳೆಯಿಲ್ಲ ಸಾಗರವೂ ಬಹುದೂರ

ಗುಡ್ಡಗಳೇ ಕ್ಷಿತಿಜವು ಎಲ್ಲ ಕಡೆಗೆ

ದಿಕ್ಕುಗಳು ನೆರೆಬಂದು ದುಂಡಗೆ ಮೈಚೆಲ್ಲಿ

ನೋಡನಿಂತಿವೆ ಉರಿಶಿಶ್ನದೆಡೆಗೆ

 

ಕಾಲವೆನ್ನುವೆಯೋ ನಿರಾಕಾರವೆನ್ನುವೆಯೋ

ಸಮ್ರಾಟ ಬಯಸಿದ ಉನ್ಮತ್ತ ಸ್ಥಿತಿಯೋ

ಮೂಲದಲಿ ಮಾನವನ ಕಾಲಡಿಯ ಹಾದಿ

ಏರಿದರೆ ಏರುವೀ ಏರಿ ದೇವಗಿರಿಯೋ

 

ಹಳ್ಳಿಹೊಲಗಳು ಬಂಜೆ ಕಲ್ಲುಬಯಲುಗಳು ಸುತ್ತ

ಉಬ್ಬಸದ ಹೆದ್ದಾರಿ ಹಿಡಿದು ಔರಂಗಾಬಾದು

ಅಲ್ಲಿಂದ ಮುಂದುಂಟು ಎಲ್ಲೋರಾ, ಅಜಂಠಾ

ವಿಪರೀತಗಳ ನಡುವೆ ಇದು ದಿವ್ಯ ಬೀಡು

 

ನೋಟ ನಿಲುಕದು, ಮಾಟ ನಿಲುಕದು, ಮಾತಿಗೋ ಇಲ್ಲೆಇಲ್ಲ

ಹತ್ತಿ ದುರ್ಗಮ ಕೋಟೆ ಕಾಲು ಕಂಗಾಲು

ಅವಶೇಷಗಳನು ಬಿಟ್ಟು ಮುಂದೆನಡೆದು ನೋಡಿದರೆ

ಅಡಿಯ ಕಂದಕದಿಂದೆದ್ದ ಗೋಡೆ ಕಡೆದಿಟ್ಟ ಕಲ್ಲು

 

ಬಿಲ್ಲೆ ಮೇಲಿನ ಮೊಹರು ಕತ್ತಿಅಲುಗಿನ ಸೃಷ್ಟಿ

ರಕ್ತಚಿತ್ರಗಳ ರಹದಾರಿ ತಂದಿತಿಲ್ಲಿಗೆ ದಿಲ್ಲಿ

ಕ್ರೂರ ಮಹಾಮತಿ ತನ್ನ ಹೊಸ ತರ್ಕ ಹೆಣೆದಂತೆ

ಹುಟ್ಟಿತಿಲ್ಲಿ ಮಸಣರೂಪದ ಅವನ ರಾಜಧಾನಿ

 

ತಾರೆಸಂಕುಲ ತಂದು ಸಾಮ್ರಾಜ್ಯ ಸಿಂಗರಿಸಿ

ಇತಿಹಾಸದಲಿ ನೆಲೆಸಿರುವ ರಮ್ಯ ಬಿಂದು

ಮುಠ್ಠಾಳ ತುಘಲಕನ ಅತಿಬುದ್ದಿಯ ಕಥೆ

ಹುಚ್ಚು ಕನಸಿನ ತುಣುಕು ದೌಲತಾಬಾದು

— ಕಮಲಾಕರ ಕಡವೆ (ಚೂರುಪಾರು  ರೇಷಮೆ)

 

image form: google images

ಮರಳಿದೆನು ಮನೆಗೆ, ಎಲ್ಲಿಗೂ ಹೋಗಲಿಲ್ಲ

ಬಿಡುವಿರದೆ ಸಾಗಿದ್ದಾರೆ ಜನ ನೂರುದಾರಿಗಳಲ್ಲಿ

ಆದರೂ ಹೆಜ್ಜೆಗಳ ಗುರುತು ಮೂಡಲಿಲ್ಲ

ಎಲ್ಲಿ ಹೋಗಲಿ ಈ ಸೊಕ್ಕುಸಂದಣಿಯಲ್ಲಿ

ಮರಳಿದೆನು ಮನೆಗೆ, ಎಲ್ಲಿಗೂ ಹೋಗಲಿಲ್ಲ

 

ಮಾರುಕಟ್ಟೆಯಲಿ ಅನುಗಾಲ ಜನರ ಪರಸ್ಪರ ಭೇಟಿ

ಆದರೂ ಮನಸುಗಳು ಅನ್ಯೋನ್ಯ ಬೆಸೆಯಲಿಲ್ಲ

ಏನಿತ್ತು ಸುಲಲೀತ ಒಲವಿರದ ಜಗದಲ್ಲಿ

ಮರಳಿದೆನು ಮನೆಗೆ, ಎಲ್ಲಿಗೂ ಹೋಗಲಿಲ್ಲ

 

ಉರಿವ ದಿನಚರಿಯಿಂದ ಘಾಸಿಯಾಯಿತು ಹೃದಯ

ಆದರೂ ಹುಣ್ಣಿಮೆಯ ಬೆಳಕನಾರೂ ಕಾಣುತಿಲ್ಲ

ಸಮಯವೇ ಇರಲಿಲ್ಲ ಲೆಕ್ಕದೀಲೋಕದಲಿ

ಮರಳಿದೆನು ಮನೆಗೆ, ಎಲ್ಲಿಗೂ ಹೋಗಲಿಲ್ಲ

 

ಕ್ಷಣಕ್ಷಣಕೂ ಮಾತುಗಳ ವಿನಿಮಯಕೆ ಇಲ್ಲ ಮಿತಿ

ಯಾರೊಳಗೂ ಸಹಮತಿಯು ಮೂಡುತಿಲ್ಲ

ಹಾಡುವುದು ಹೇಗಿಲ್ಲಿ ದನಿಗಳಬ್ಬರದಲ್ಲಿ

ಮರಳಿದೆನು ಮನೆಗೆ ಎಲ್ಲಿಗೂ ಹೋಗಲಿಲ್ಲ

 

ಬಿಸಿಲ ತಾಪಕೆ ನಾಚಿ ಮುಸುಕಿನಲಿ ಮುಚ್ಚಿರಲೇ

ನನೆಯೊಳಗೆ ಮರುಳ ನಾನಾದೆ ಒಂಟಿ

ತೆರೆದಿಟ್ಟೆ ಬಾಗಿಲನು, ಒಳಕರೆದೆ ಮಂದಿಯನು

ಸೇರಿ ಸುರ ಸಾರಿದೆವು, ಯಾರನೂ ಮರೆಯಲಿಲ್ಲ

————— ಕಮಲಾಕರ ಕಡವೆ

ಗೆಬ್ರಿಯೆಲಾ ಮಿಸ್ಟ್ರೆಲ್ ಕವಿತೆ: ಪುಟ್ಟ ಪಾದಗಳು

ಪುಟ್ಟ ಪಾದಗಳು

ಮಗುವೊಂದರ ಪುಟ್ಟ ಪಾದಗಳು

ನೀಲಿ,

ಥಂಡಯಿಂದ ನೀಲಿಯಾಗಿವೆ;

ಹೇಗವರು ನೋಡಿಯೂ ನಿರ್ಲಕ್ಷದಿಂದ ನಡೆದಿದ್ದಾರೆ

ಓ! ದೇವರೇ.

ಕಲ್ಲು ಹರಳುಗಳಿಂದ ಎಲ್ಲೆಡೆ ಚುಚ್ಚಿಸಕೊಂಡ

ಪುಟಾಣಿ ಗಾಯಾಳು ಪಾದಗಳು

ಹಿಮ ಹಾಗೂ ಕೆಸರು ಸೇರಿ ನೋವಿಗೀಡಾಗಿವೆ

ಮನುಷ ತನ್ನ ಕುರುಡುತನದಲ್ಲಿ ಕಾಣದಾಗಿದ್ದಾನೆ

ನೀನು ಕಾಲೂರದಲ್ಲಿ ಅರಳುವ

ಬೆಳಕಿನ ಉಜ್ವಲ ಹೂಗುಚ್ಚಗಳನ್ನು;

ನಿನ್ನ ರಕ್ತಸೂಸುವ ಪಾದಬಿದ್ದಲ್ಲಿ

ಬೆಳೆಯುವ ಸುಗಂಧಿತ ಗೆಡ್ಡೆಹೂವುಗಳನ್ನು

ನೀನು ಹೇಗೋ ಬೀದಿಯಲ್ಲಿ

ನೇರವಾಗಿಯೇ ನಡೆಯುವೆ, ಮಗುವೇ

ದೋಷರಹಿತ ಧೈರ್ಯಶಾಲಿ

ಮಗುವಿನ ಪುಟಾಣಿ ಪಾದಗಳು

ನರಳಿರುವ ಸಣ್ಣ ಸಣ್ಣ ರತ್ನದ್ವಯಗಳು

ಅದು ಹೇಗೆ ಜನರು ಸಾಗಿದ್ದಾರೆ ಕಣ್ಣಿಗೇ ಹಾಕಿಕೊಳ್ಳದೇ!

ಮುಗಿಯದ ಮಧ್ಯಾಹ್ನ

ವಿಲಿಯಂ ಶೇಕ್ಸ್ ಪಿಯರ್ – ಸಹಮನಸ್ಕರ ಮದುವೆಗೆ ಅಡಚಣೆಯ ತರಲಾರೆ

ಸಹಮನಸ್ಕರ ಮದುವೆಗೆ ಅಡಚಣೆಯ ತರಲಾರೆ

ವಿಲಿಯಂ ಶೇಕ್ಸ್ ಪಿಯರ್ (ಸುನೀತ ೧೧೬)

ಸಹಮನಸ್ಕರ ಮದುವೆಗೆ ತಡೆಯ ತರಲಾರೆ
ನಾನು. ಪ್ರೀತಿಯದು ಪ್ರೀತಿಯಲ್ಲ ಕಂಡಂತೆ
ಬದಲಾದ ಪರಿಸರವ ತಾನೂ ಬದಲುತ್ತಲಿರೆ,
ಅಥವಾ ಪ್ರೇಮಿ ನಿಲುವಲ್ಲಿ ಪಲ್ಟಿಯಾದಂತೆ:

ಇಲ್ಲವೇ ಇಲ್ಲ! ಅದೊಂದು ಸದಾಸ್ಥಿರ ಚಿನ್ಹೆ
ಬಿರುಗಾಳಿಯೆದುರಿಗೂ ಕಂಪಿಸದಿರುವುದು.
ಅಲೆವ ನಾವೆಗಳಿಗೆಲ್ಲ ಅದುವೆ ಸ್ಥಾಯಿ ಚುಕ್ಕೆ
ದೂರವರಿತರೂ ಅದರ ಬೆಲೆಯರಿಯದಂತದ್ದು

ಪ್ರೀತಿಯಲ್ಲ ಕಾಲದ ಗುಲಾಮ, ಸುಂದರಾಂಗಗಳು
ಇದ್ದಾವೆ ಅವನ ಡೊಂಕು ಕುಡುಗೋಲಿನ ಅಂಕೆಯಲಿ
ಪ್ರೀತಿಯ ಬದಲಿಸದು ಅವನ ಕ್ಷಣಿಕ ತಾಸು ವಾರಗಳು
ನಾಶದಂಚಿನವರೆಗೂ ತಾಳುವುದು ಕೆಚ್ಚಿನಲಿ.

ರುಜುಮಾಡಿ ತೋರಿದರೆ ನನ್ನೀ ಮಾತು ತರವಲ್ಲ
ನಾನು ಕವಿಯೇ ಅಲ್ಲ, ಪ್ರೇಮಿಯೂ ಎಲ್ಲಿಲ್ಲ.

ಶೇಕ್ಸಪಿಯರನ ಬಹುಚರ್ಚಿತ ಸುನೀತಗಳಲ್ಲಿ ಇದು ಒಂದು. ಇಲ್ಲಿ ಆತ ನಿಜವಾದ ಪ್ರೀತಿ ಹೇಗೆ ಎಂದಿಗೂ ಬದಲದೇ, ದೃವತಾರೆಯಂತೇ ಸ್ಥಿರವಾಗಿಯೂ, ಹಾಗೂ ಅದರಂತೆ ದಿಕ್ಕ್ಸೂಚಿಯಾಗಿಯೂ ಇರುತ್ತದೆ ಎಂದು ವಾದಿಸುತ್ತಾನೆ. ಯುರೋಪಿನ ನವೋದಯ (renaissance) ಕಾಲದ ಆದರ್ಶವಾದೀ ಕಲ್ಪನೆಗಳ ಮಾದರಿಯಲ್ಲಿ ಇದೊಂದು ಉದಾಹರಣೆ. ಇಲ್ಲಿ ನಾವು ಆದರ್ಶವಾದದೊಂದಿಗೆ ಕಾಣುವ ಇನ್ನೊಂದು ಅಂಶವೆಂದರೆ ವಿಚಾರವೊಂದನ್ನು ಎತ್ತಿಕೊಂಡು ವಾದಿಸುತ್ತ ಹೋಗುವ ತಾರ್ಕಿಕ ಧಾಟಿ. ಹಾಗೆಯೇ ಅಂತ್ಯದಲ್ಲಿ ಬರುವ ನಾನು ಕವಿಯೇ ಅಲ್ಲ ಅನ್ನುವ ಮಾತು (i never writ) ಸೂಚಿಸುವಂತೆ ವ್ಯಕ್ತಿಯೊಬ್ಬನ ವಿಚಾರವೂ ಮುಖ್ಯ ಎಂಬ ವಿಶ್ವಾಸ. ಇವೆರಡನ್ನೂ ಯುರೋಪಿನ ನವೋದಯದ ಗುರುತಾಗಿ ಕಾಣುವುದು ವಾಡಿಕೆ. ಹೀಗೆ ಕಾವ್ಯದಲ್ಲಿ ತಾರ್ಕಿಕವಾಗಿ ವಾದಿಸುವ ಶೈಲಿ ಮುಂದೆ metaphysical ಕಾವ್ಯಕ್ಕೆ ದಾರಿ ಮಾಡುತ್ತದೆ; ಅಲ್ಲಿ ಇದು ಅತಿಯೆನ್ನುವ ಮಟ್ಟಿಗೆ ತಲುಪಿ ಶಬ್ದದೊಂದಿಗಿನ ಜಾಣ್ಮೆಯನ್ನು ತೋರುವ ಕವನಗಳೇ ಹೆಚ್ಚಾಗಿ ಬರೆಯಲಾಯಿತು.ಇಲ್ಲಿ, ಶೇಕ್ಸಪಿಯರ ಸಿನಿಕತನವನ್ನು ತೊರೆದ ಒಂದು ಆದರ್ಶ ಪ್ರೀತಿಯನ್ನು ಹೊಗಳುತ್ತಾನೆ. ಇಲ್ಲಿ ಮೊದಲ ಸಾಲಲ್ಲಿ ಬರುವ ‘ತಡೆ ತರುವ ವಿಚಾರ’ ಕ್ರಿಶ್ಚಿಯನ ಮದುವೆಗಳಲ್ಲಿ ಗಂಡು – ಹೆಣ್ಣು ದಂಪತಿಗಳೆಂದು ಸಾರುವ ಮೊದಲು ಯಾರಾದರೂ ಅವರು ದಂಪತಿಗಳಾಗಬಾರದು ಎಂದು ತಡೆ ತರಬಹುದಾದ ಆಚರಣೆ ಕುರಿತಾಗಿದೆ. ಆದರೆ ಇಲ್ಲಿ ‘ಮದುವೆ’ ಶಬ್ದ ಸೀಮಿತವಾದದ್ದಲ್ಲ. ಅದನ್ನು ಮಿಲನವೆಂದು ಕೂಡ ಅರ್ಥಿಸಿಕೊಳ್ಳಬಹುದಾಗಿದೆ. ಸಹಮನಸ್ಕರು (‘True minds’) ಕೂಡ ಪ್ರೇಮಿಗಳಿಗೆ ಉಪಯೋಗಿಸುವ ಸಾಮಾನ್ಯ ಶಬ್ದವಾಗದೇ, ಯಾರು ನಿಜವಾಗಿಯೂ ಪ್ರೇಮಿಸುವ ಯೋಗ್ಯತೆಯುಳ್ಳವರೋ ಅವರ ಕುರಿತಾಗಿದೆ. ಅಂದರೆ, ನಿಜ ಪ್ರೀತಿ ಎನ್ನುವುದನ್ನು ಮಾನಸಿಕ ಅವಸ್ಥೆಯ ಜತೆ ಜೋಡಿಸಿ, ಕವಿ ಪ್ರೀತಿಯಲ್ಲಿ ವೈಚಾರಿಕತೆಯ ಜರೂರಿಯನ್ನು ಸೂಚಿಸುತ್ತಾನೆ. ಹಾಗಾಗಿ, ನಾವು ಸಾಮಾನ್ಯವಾಗಿ ಶೇಕ್ಸಪಿಯರನನ್ನು ರಮ್ಯಕವಿಯಾಗಿ ಕಂಡರೂ, ಅವನಲ್ಲಿಯೂ ವೈಚಾರಿಕತೆಗಿದ್ದ ಒಲವು ಕಾಣಬಹುದಾಗಿದೆ. ಇದನ್ನು ಅನುವಾದ ಮಾಡುತ್ತ ನನ್ನ ಮನಸ್ಸಿನಲ್ಲಿ ಇದ್ದ ವಿಚಾರವೆಂದರೆ ಅನುವಾದಿತ ಕವನವು ಕನ್ನಡದ ಕವನವೆಂದೇ ತೋರುವಂತಾಗಬಾರದು ಎಂದು. ಅನುವಾದದ ಕುರಿತಾಗಿ ಇರುವ ಅನೇಕ ಭಿನ್ನಾಭಿಪ್ರಾಯಗಳಲ್ಲಿ ಇದು ಒಂದು: ಅನುವಾದ ಗುರಿ ಭಾಷೆಯಲ್ಲಿ ಒಂದಾಗಬೇಕೆಂಬುದಾಗಿ, ಯಾ ಮೂಲ ಭಾಷೆ ಬೇರೆ ಎಂಬುದನ್ನು ಓದುಗರಿಗೆ ಸದಾ ನೆನಪಿಸುತ್ತಲಿರಬೇಕೆಂಬುದಾಗಿ. ಹಾಗಾಗಿ ಇಂಗ್ಲೀಷಿನ ಸಾನೆಟ್ ಗೆ ಕನ್ನಡದಲ್ಲಿ ಸುನೀತವೆನ್ನುವುದು ಕೂಡ ಸರಿಯಲ್ಲವೇನೋ ಎಂದು ಕೆಲ ಬಾರಿ ಅನಿಸುತ್ತದೆ. ನನ್ನ ಈ ಅನುವಾದ ಒಂದು ಕಚ್ಚಾ ಪ್ರಯೋಗವಷ್ಟೇ. ಇದನ್ನು ಇತರರೂ ಕೂಡ ಅನುವಾದಿಸಿರಬಹುದು ಈ ಮೊದಲೇ. ನಾನು ಹುಡುಕಿ ನೋಡುವುದು ಬಾಕಿಯಿದೆ.

ಅಲ್ಲಮಪ್ರಭುವಿನ ಶಿಲೆಯೊಳಗಣ ಪಾವಕನಂತೆ

‘ಶಿಲೆಯೊಳಗಣ ಪಾವಕನಂತೆ’

ಶಿಲೆಯೊಳಗಣ ಪಾವಕನಂತೆ

ಉದಕದೊಳಗಣ ಪ್ರತಿಬಿಂಬದಂತೆ

ಬೀಜದೊಳಗಣ ವೃಕ್ಷದಂತೆ

ಶಬ್ದದೊಳಗಣ ನಿಶ್ಶಬ್ದದಂತೆ

ಗುಹೇಶ್ವರ, ನಿಮ್ಮ ಶರಣ ಸಂಬಂಧ

ಅಲ್ಲಮಪ್ರಭುವಿನ ಈ ವಚನವನ್ನು ವಿಶ್ಲೇಷಿಸುತ್ತ ಚಿಂತಾಮಣಿ ಕೊಡ್ಲೆಕೆರೆಯವರು ಅನ್ನುತ್ತಾರೆ: “ಭಕ್ತ ಶಿಲೆಯಾದರೆ ಭಗವಂತ ಪಾವಕ, ಭಕ್ತ ಉದಕವಾದರೆ ದೇವರು ಅಲ್ಲಿ ಹುಟ್ಟುವ ಪ್ರತಿಬಿಂಬ… ಮುಂದಿನ ಸಾಲು ಭಗವಂತನನ್ನು ‘ಬೀಜದೊಳಗಣ ವೃಕ್ಷ’ವೆಂದು ಗುರುತಿಸುತ್ತದೆ.” ಇತ್ಯಾದಿ. ಇದು ಅವರ “ಅಂತರಂಗದ ಆಕಾಶ” ಎನ್ನುವ ಪುಸ್ತಕದಲ್ಲಿ ಬರುವ ಮಾತುಗಳು. ಈ ಪುಸ್ತಕ ತಾತ್ವಿಕತೆ ಹಾಗೂ ಕಾವ್ಯದ ಕುರಿತ ಸಂಬಂಧದ ಅಧ್ಯಯನವಾಗಿದ್ದು, ಕನ್ನಡ ವಿಮರ್ಶಾ ಲೋಕಕ್ಕೆ ಒಳ್ಳೆಯ ಕೊಡುಗೆಯಾಗಿದೆ.ಈ ವಚನವನ್ನು ಓದುತ್ತ ನನಗೆ ಒಂದು ಸಂದೇಹ. ಅಲ್ಲಮನ ತಾತ್ವಿಕ ವಿಚಾರಗಳ ಅರಿವಿಲ್ಲದ ನಾನು ಇದನ್ನು ಒಂದು ಕವನವಾಗಿಯಷ್ಟೇ ಓದುತ್ತಿದ್ದೇನೆ. ವಚನದ ಕೊನೆಯ ಸಾಲಿನ ಬಂಧ ನೋಡಿದರೆ, ಒಟ್ಟೂ ವಚನದಲ್ಲಿ ಬರುವ ಮೊದಲ ಶಬ್ದಗಳು, ಅಂದರೆ, ಶಿಲೆ, ಉದಕ, ಬೀಜ, ಶಬ್ದ, “ನಿಮ್ಮಶರಣ ಸಂಬಂಧ” ದ ‘ನಿಮ್ಮ’ದ ಜತೆ ಸೇರುತ್ತವೆ ಹಾಗೂ ಪಾವಕ, ಪ್ರತಿಬಿಂಬ, ವೃಕ್ಷ, ನಿಶ್ಶಬ್ದ, ಇವು ‘ಶರಣ’ದ ಜತೆ ಸೇರುವುದೆಂದು ಅನಿಸುತ್ತದೆ. ಅಂದರೆ ಶರಣ ಈ ವಚನದಲ್ಲಿ ಕೊಡ್ಲೆಕೆರೆಯವರು ಅನ್ನುವಂತೆ ಶಿಲೆಯಾಗಿ ಬಾರದೆ ಅದರೊಳಗಣ ಪಾವಕನಾಗಿ, ಹಾಗೂ ಗುಹೇಶ್ವರ ಶಿಲೆಯಾಗಿ ಬರುತ್ತಾರೆ. ಅಂತೆಯೇ ಉಳಿದ ಸಾಲುಗಳಲ್ಲಿ ಕೂಡ. ಹೀಗೆ ನೋಡಿದಾಗ ಪ್ರಾಥಮಿಕತೆ ಬರೀ ತೋರಿಕೆಗಷ್ಟೇ ಅಲ್ಲದೇ ಅರ್ಥದಲ್ಲಿಯೂ ಗುಹೇಶ್ವರನಿಗೆ ಸಲ್ಲುತ್ತದೆ. ಅಂದರೆ, ಶಿಲೆ ಗುಹೇಶ್ವರನಾದರೆ, ಅದರೊಳಗಿರಬಹುದಾದ ಅಂಶಗಳಲ್ಲಿ ಶರಣನೂ ಒಂದು. ಉದಕ ಗುಹೇಶ್ವರನಾದರೆ ಆತನೇ ಇಡೀ ವಿಶ್ವವನ್ನು ಒಳಗೊಂಡಂತೇ ಪ್ರತಿಬಿಂಬಿಸುವನು; ಬೀಜ ಗುಹೇಶ್ವರನಾದರೆ ಶರಣನೆಂಬ ವೃಕ್ಷದ ಹುಟ್ಟಿನ ಮೂಲವೇ ಅವನಾಗುತ್ತಾನೆ. ಶಬ್ದ ಗುಹೇಶ್ವರನಾದರೆ ಅರ್ಥವಂತಿಕೆಯ ಅಂಶವಾದ ನಿಶ್ಶಬ್ದ ಶರಣನಾಗಿರುತ್ತಾನೆ. ಹಾಗೂ ಈ ಸಮೀಕರಣದಲ್ಲಿ ಮೊದಲು ಬರುವ ಅಂಶಗಳು ಹೆಚ್ಚಿನ ವ್ಯಾಪ್ತತೆ ಪಡೆದಿದ್ದು ದೈವಶಕ್ತಿಯ ವಿಶಾಲತೆ ಪಡೆಯುತ್ತವೆ. ಅಂತೆಯೇ, ಅವು ನಿತ್ಯವಾಗಿದ್ದಾದರೆ, ಅವನ್ನು ಅವಲಂಬಿಸಿರುವ ಎರಡನೆಯ ಘಟಕಗಳು ಅನಿತ್ಯ. ನಂತರ ಬರುವ ಅಂಶಗಳು ಒಂದು ಘಟಕವಷ್ಟೇ ಆಗಿ ಮೊದಲಿನ ಘಟಕದಲ್ಲಿಯೇ ಲೀನವಾಗುವ ಅಂಶವಾಗುತ್ತವೆ.ಈ ವಚನದ ರಚನಾ ಬಂಧ ನೋಡಿದರೆ ಕೂಡ ಹೀಗೆ ಓದುವುದು ಸಾಧ್ಯವೆನಿಸುತ್ತದೆ. ಏಕೆಂದರೆ ‘ಒಳಗಣ’ ಎಂಬ ಪದವು ಮೊದಲು ಬರುವ ಪದಗಳ ಜತೆ ಇದೆ. ಅಂದರೆ ‘ಒಳಗೊಳ್ಳುವ’ ವ್ಯಾಪ್ತಿ ಆ ಪದಗಳು ಸೂಚಿಸುವ ವಸ್ತುಗಳೊಂದಿಗೆ ಇವೆ. ಶಿಲೆಗೆ ಒಳಗೊಳ್ಳುವ ವ್ಯಾಪ್ತಿಯಿದೆ, ಉದಕಕ್ಕೆ ಪ್ರತಿಬಿಂಬವನ್ನು ಒಳಗೊಳ್ಳುವ ವ್ಯಾಪ್ತಿ ಇದೆ…ಇತ್ಯಾದಿ. ಹೀಗೆ ಒಳಗೊಳ್ಳುವ ವ್ಯಾಪ್ತಿ ಇರುವುದೇ ಗುಹೇಶ್ವರನ ಪ್ರಾಥಮಿಕತೆಯನ್ನು ಸೂಚಿಸುವುದರಿಂದ ಶರಣ ಆತನಲ್ಲಿ ಒಳಗೊಳ್ಳುವದನ್ನು ಬಯಸುತ್ತಾನೆ. ಇನ್ನೊಮ್ಮೆ ಓದಿದರೆ ಅನಿಸುತ್ತದೆ: ‘ಶಿಲೆಯೊಳಗಣ ಪಾವಕದಂತೆ’ ಇರುವುದು ಏನೆಂದು ಅಲ್ಲಮಪ್ರಭು ಹೇಳುತ್ತಿದ್ದಾನೆ? ‘ನಿಮ್ಮ ಶರಣ ಸಂಬಂಧ’ ಎಂದು. ಅಂದರೆ, ಇಲ್ಲಿ ಶಿಲೆ ಪಾವಕಗಳು ಅಮುಖ್ಯ ಹಾಗೂ ‘ಒಳಗಣ’ ಮುಖ್ಯ. ಅಂದರೆ, ಶಿಲೆ ಗುಹೇಶ್ವರನೆಂದಾಗಲೀ, ಪಾವಕ ಶರಣನೆಂದಾಗಲೀ ನೋಡುವ ಬದಲು ಇವೆರಡರ ನಡುವಿನ ಸಂಬಂಧವಷ್ಟೇ ಉಪಮೆಯಾಗಿ ಬರುತ್ತದೆ. ಶಿಲೆ ಹಾಗೂ ಪಾವಕ ಆ ಉಪಮೆಯನ್ನು ಸಾಧ್ಯಗೊಳಿಸುವ ಘಟಕಗಳು ಮಾತ್ರ. ಅಂದರೆ, ಗುಹೇಶ್ವರ ಹಾಗೂ ಶರಣರ ಸಂಬಂಧಕ್ಕೂ, ಶಿಲೆಯೊಳಗೆ ಕಾಣದೆಯೂ ಹೂತಿರುವ ಪಾವಕಕ್ಕೂ ಸಂಬಂಧ ಬರುವುದು ಒಳಗೊಳ್ಳುವ ಅರ್ಥವನ್ನು ಗಮನಿಸಿದಾಗ ಮಾತ್ರ. ಹಾಗಾಗಿ, ಶಿಲೆಯೊಳಗೆ ಸದಾಸಾಧ್ಯವಿರುವ ಪಾವಕ, ನೀರಿನಲ್ಲಿ ಸದಾಸಾಧ್ಯವಿರುವ ಬಿಂಬ, ಬೀಜದಲ್ಲಿ ಸದಾಸಾಧ್ಯವಿರುವ ವೃಕ್ಷ, ಶಬ್ದದಲ್ಲಿ ಸದಾಸಾಧ್ಯವಿರುವ ನಿಶ್ಶಬ್ದದಂತೇ, ಶರಣರು ಗುಹೇಶ್ವರನೊಳಗೇ ಇರುವ ಅಂಶವಾಗಿ ಸಾಬೀತಾಗುತ್ತಾರೆ. ಶಿಲೆಯೊಳಗೆ ಪಾವಕವೇ ಹೊರತು, ಪಾವಕದೊಳಗೆ ಶಿಲೆಯಲ್ಲ. ಹಾಗಾದರೆ, ಗುಹೇಶ್ವರನೊಳಗೆ ಶರಣನಿದ್ದಾನೆ; ಶರಣನೊಳಗೆ ಗುಹೇಶ್ವರನಿಲ್ಲವೇ? ‘ಒಳಗಣ’ ಎನ್ನುವ ಸಂಬಂಧ ಪರಸ್ಪರವಲ್ಲವೇ? ಶರಣನೊಳಗೆ ಗುಹೇಶ್ವರನನ್ನು ಬರಮಾಡಿಕೊಳ್ಳುವುದೇ ಶರಣನ ಭಕ್ತಿಯ ಉದ್ದೇಶವಾದ್ದರಿಂದ, ಅದು ಈಗಾಗಲೇ ಇರುವ ಸ್ಥಿತಿಯಾಗಲಾರದು. ಈ ವಚನ ಸೂಚಿಸುವ ಭಕ್ತಿಯ ಮೂಲಕ ಆ ಸ್ಥಿತಿಗೆ ಶರಣ ತಲುಪುವ ಆಸೆ ಹೊಂದಿದ್ದಾನೆ. ಇಲ್ಲಿ ಸಂಬಂಧವನ್ನು ಅವಲಂಬನೆಯಾಗಿ ನೋಡಲಾಗಿರುವುದನ್ನು ಗಮನಿಸಬೇಕು. ಗುಹೇಶ್ವರನ ಅವಲಂಬಿಸಿ ಶರಣನಿದ್ದಾನೆ. ಇಲ್ಲಿನ ಉಪಮೆಗಳನ್ನು ಇನ್ನೂ ಗಂಭೀರವಾಗಿ ತಗೊಳ್ಳಬಹುದು. ಅವು ಆರೋಪಿಸುವ ಮಿತಿಯನ್ನು ನೋಡಬೇಕು. ಶರಣನು ಶಿಲೆಯೊಳಗಣ ಪಾವಕದಂತಿದ್ದಾನೆ; ಆದರೆ ಪಾವಕ ಶಿಲೆಯ ಹೊರತೂ ಇದ್ದೀತು. ಅಂದರೆ, ಶಿಲೆಯೊಳಗೇ ಇರಬೇಕಾದುದು ಪಾವಕದ ಇರವಿನ ಕಡ್ಡಾಯ ಸ್ಥಿತಿಯಲ್ಲ. ಹಾಗೆಯೇ ಇತರ ಉಪಮೆಗಳಲ್ಲೂ ಕೂಡ. ಹಾಗಾದರೆ, ಶಿಲೆಯ ಹೊರತಾಗಿ ಪಾವಕವಿದೆಯಾದರೆ ಶಿಲೆಯ ಮಹತ್ವವೇನಿದ್ದೀತು? ಇಲ್ಲಿ, ಒಳಗಣ ಶಬ್ದದ ಒತ್ತಡ ಕೆಲಸ ಮಾಡುತ್ತದೆ. ಅಂದರೆ, ಎಲ್ಲಿಯೂ ಇರಬಹುದಾದ ಪಾವಕ ಶಿಲೆಯೊಳಗಿನದಾಗಿದ್ದರೆ, ಅದನ್ನು ಹೊಮ್ಮಿಸುವ ಕಲೆ ಶಿಲೆಗೆ ಮಾತ್ರ ಸಾಧ್ಯ. ಎಲ್ಲಿಯೂ ಇರಬಹುದಾದ ಶರಣ ಗುಹೇಶ್ವರನೊಂದಿಗಿದ್ದರೆ ಅವನಿಗೆ ಒಳಿತು. ಶರಣನ ವ್ಯಕ್ತಿತ್ವ ಎಲ್ಲಿಯೂ ಪ್ರತಿಫಲಿತವಾಗಬಹುದಾಗಿದ್ದರೂ, ಅದು ಗುಹೇಶ್ವರನೆಂಬ ಉದಕದಲ್ಲಿ ಪ್ರತಿಫಲಿತವಾದರೆ ಶರಣನಿಗೆ ಒಳಿತು… ಇತ್ಯಾದಿ. ಅಂದರೆ ಶರಣನಿಗೆ ಸ್ವಾತಂತ್ರ್ಯವಿದೆ ತನ್ನ ಇರವನ್ನು ಹಾಗೆಯೇ ತನ್ನ ಇಷ್ಟದೇವವನ್ನು ಆಯಲು ಸಹ. ಹಲವು ಆಯ್ಕೆಗಳಲ್ಲಿ ಕವಿ ಈ ಆಯ್ಕೆ ಒಳಿತು ಅನ್ನುವ ಮತ ಹೊಂದಿದ್ದಾನೆ.ಬೆಂಕಿಗೆ ಹೋಲಿಸಿದರೆ ಶಿಲೆ ಸ್ಥಾಯಿಗುಣವಿದೆ. ಪ್ರತಿಬಿಂಬಕ್ಕೆ ಹೋಲಿಸಿದರೆ ಉದಕ ಹೆಚ್ಚು ಮೂರ್ತ. ವೃಕ್ಷಕ್ಕೆ ಹೋಲಿಸಿದರೆ ಬೀಜ ಕಾಣದೆಯೇ ಸೃಜಿಸುವ ಗುಣದ್ದಾಗಿದೆ. ನಿಃಶ್ಶಬ್ದ ಸ್ಥಿತಿಯಿಲ್ಲದ್ದು, ಅಥವಾ ನಿಜವಲ್ಲದ್ದು, ಅಭಾವವನ್ನು ಸೂಚಿಸುವಂತದ್ದು.ಕೊನೆಯ ಸಾಲು ಸೂಚಿಸುವ ಸಮಸ್ಯೆಯೆಂದರೆ: ವಾಚಿಸುವಾತ ಈ ವಚನದೊಳಗಿಲ್ಲ. ಆತ ಮೂರನೆಯವ. ಆತ ‘ನಿಮ್ಮ’ ಹಾಗೂ ‘ಶರಣ’ ರ ಸಂಬಂಧವನ್ನು ಬಣ್ಣಿಸಿದ್ದಾನೆ. ನಿಮ್ಮ-ನಮ್ಮ ಸಂಬಂಧವನ್ನಲ್ಲ. ತನ್ನದೇ ಅನುಭವವನ್ನು ಹೇಳುತ್ತಿದ್ದರೆ ಈ ಸಂಬಂಧದ ಸಮೀಕರಣದಲ್ಲಿ ವಾಚಕ ಯಾಕೆ ಕಾಣೆಯಾಗಿದ್ದಾನೆ?

ಶೇಕ್ಸಪಿಯರ – ಆತ್ಮ, ಪಾಪಿ ಭೂಮಿಯ ಕೇಂದ್ರ

ಆತ್ಮ, ಪಾಪಿ ಭೂಮಿಯ ಕೇಂದ್ರ
ಶೇಕ್ಸಪಿಯರ

ಪಾಪ, ಆತ್ಮ, ನನ್ನ ಈ ಪಾಪಿ ನೆಲದ ಕೇಂದ್ರವೆ
ಯಾಕೆ ಹೂತಿರುವೆ ಈ ಬಂಡುಕೋರರ ನಡುವಲ್ಲಿ
ಯಾಕೆ ಒಳಗೊಳಗೇ ಸೊರಗುವೆ, ಕೊರಗ ಸಹಿಸುವೆ
ಹೊರಗೋಡೆಗಳನು ಸಿಂಗರಿಸಿ ಅದ್ದೂರಿ ಬಣ್ಣದಲಿ?

ಯಾಕಿಷ್ಟು ಧಾರಾಳ ಕಾಸು ಇಷ್ಟು ತುಸುಗಾಲಕ್ಕೆ
ಪಡೆದ ಈ ಮಂಕು ಮಹಲಿಗಾಗಿ ಹೀಗೆ ವ್ಯಯಿಸುವುದು?
ಹುಳುಗಳೇ ನಾಳೆ ವಾರಸುದಾರರು ನಿನ್ನೀ ವೈಭವಕ್ಕೆ
ತಿನ್ನವೇನು ಅದನು? ಹೀಗೇ ತಾನೆ ದೇಹ ಕೊನೆಯಗುವುದು?

ಕಾರಣ ಆತ್ಮವೇ, ಬಾಳು, ಹೇರಿ ಎಲ್ಲ ನಷ್ಟ ಆಳಿನ ಮೇಲೆ
ಸವೆಯುತ್ತ ಆತ ನಿನ್ನ ಗೋದಾಮನ್ನು ಕೊಬ್ಬಿಸುವ
ಕೊಳ್ಳು ದೈವಿಕ ಮುದ್ದತು, ಮಾರಿ ಗಂಟೆಗಟ್ಟಳೆ ಕೊಳೆ
ಪೋಷಿಸು ಅಂತರಂಗವ, ಇನ್ನಿರದಂತೆ ಹೊರ ವೈಭವ;

ಮಾನವರ ಸೇವಿಸುವ ಆ ಸಾವನ್ನೇ ಸೇವಿಸುವಂತೆ
ಸಾವು ಬಂದರೆ ಒಮ್ಮೆ ಮತ್ತೆ ಸಾವೆಂದೂ ಬರದಂತೆ

ಶೇಕ್ಸಪಿಯರನ ೧೪೬ನೇ ಸುನೀತ ದೇಹ ಹಾಗೂ ಆತ್ಮದ ಕುರಿತಿದ್ದು, ಭೌತಿಕವನ್ನು ತಿರಸ್ಕರಿಸಿ ಆಧ್ಯಾತ್ಮಿಕವನ್ನು ಅಪ್ಪುಕೊಳ್ಳುವ ತರ್ಕವನ್ನು ಆತ್ಮಕ್ಕೆ ಸಂಭೋಧಿಸಿ ಪ್ರಸ್ತುತಪಡಿಸುತ್ತದೆ. ಇಲ್ಲಿ ಬರುವ ವಿಷಯ ಕಾವ್ಯ ವಸ್ತುವಾಗಿ ಹೊಸದಲ್ಲ (ಹಾಗೆ ನೋಡಿದರೆ ಶೇಕ್ಸಪಿಯರ ಹೊಸವಸ್ತುವಿನ ಹುಡುಕಾಟ ಮಾಡುವಾತನೇ ಅಲ್ಲ). ಇದೊಂದು ಚರ್ವಿತ ಚರ್ವಣ ವಸ್ತು ಹಾಗೂ ವಾದ. ದೇಹ ಕ್ಷಣಿಕ, ಆತ್ಮ ಸಾರ್ವಕಾಲಿಕ ಎಂಬುದೇ ಇಲ್ಲಿಯ ತಥ್ಯ. ಎಂದಿನಂತೇ ಇಲ್ಲಿ ತಥ್ಯದ ಸ್ತರದಲ್ಲಿ ಕಾಣದ ಜಾಣ್ಮೆ ಕಾವ್ಯಬಂಧದಲ್ಲಿ ಕಾಣುತ್ತದೆ. ಇಲ್ಲಿನ ರೂಪಕಗಳು ಮುಖ್ಯವಾಗಿ ವಾಣಿಜ್ಯ ವಲಯದಿಂದ ಬಂದಿದೆ ಎನ್ನುವುದು ಗಮನಾರ್ಹ. ಅಂದರೆ, ಭೌತಿಕ ಜೀವನ ಕ್ಷುಲ್ಲಕ ವೆನ್ನುವ ಮಾತೆಲ್ಲವೂ ಅಲಂಕೃತವಾಗಿವೆ, ಅದೂ ಕೂಡ ಕೊಡುಕೊಳ್ಳುವಿಕೆಯ ರೂಪಕಗಳಲ್ಲಿ. ಹಾಗಾಗಿ ಈ ಸುನೀತದಲ್ಲಿ ಬರುವ ರೂಪಕಗಳ ನುಗ್ಗಾಟವಿರುವುದು ಹಣಕ್ಕೆ ಸಂಬಂಧಿಸಿದ ಅಂದರೆ ಭೌತಿಕ ಜೀವನದ ಅಗತ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ. ಹೇಳುತ್ತಿರುವ ಮಾತು ಅದರ ತದ್ವಿರುದ್ಧ ದಿಕ್ಕಿನಲ್ಲಿ. ಹೀಗೆ ಪರಸ್ಪರ ವಿರೋಧಿ ವಸ್ತುವನ್ನು ಆಯ್ದುಕೊಂಡು ಕವಿ ದ್ವಂದ್ವ ತುಳುಕುವ ಶೈಲಿಯಲ್ಲಿ ತನ್ನ ಕವನವನ್ನು ಹೆಣೆದಾಗ ಕಾಣಬರುವ ಸೊಬಗೆಂದರೆ ಭಾಷೆಯ ಸ್ತರದಲ್ಲಿಯೇ ಇಂಥಹ ವೈರುಧ್ಯಗಳನ್ನು ಲೇವಡಿ ಮಾಡಿಬಿಡುವ ತುಂಟತನ. ಅದೆಷ್ಟೋ ವರ್ಷಗಳಿಂದ ಓದುಗರು ಈ ಸುನೀತವನ್ನು ಆತ್ಮದ ಹೆಚ್ಚುಗಾರಿಕೆಯ ಕುರಿತಾದ್ದು ಎಂದು ಪರಿಗಣಿಸಿ ಓದುತ್ತಿದ್ದಾರೆ. ಆದರೆ, ಆ ತುಂಟ ಕವಿ ನಗುತ್ತಾನೆ: ದೇಹ ಹೆಚ್ಚೋ, ಆತ್ಮ ಹೆಚ್ಚೋ ಎನ್ನುವ ನುಗ್ಗಾಟ ನಡೆಸಿ ನೀವು; ನಾನು ಮಾತ್ರ ಇಂಥಹ ದ್ವಂದ್ವಗಳ ಕಿರುಕುಳ ಬಗ್ಗೆ ಉಪಹಾಸ ಮಾಡಿಬಿಡುವೆ!

ಜಯಂತ ಮಹಾಪಾತ್ರ – ಹಸಿವು

ದೇಹದಾಹದ ಸೆಳವು ನನ್ನಲ್ಲಿ ಇಷ್ಟೆಂದು ನಂಬಲಾರೆ;
ಮೀನುಗಾರನೆಂದ ಅಸಡ್ಡೆಯಿಂದ: ಬೇಕಾ ನಿನಗೆ ಅವಳು.
ನರಜಾಲದಂತೆ ಅವನ ಹಿಂದೆಳೆವ ಬಲೆ; ಶಬ್ದಗಳೇ
ತನ್ನ ಉಳಿವಿನ ಇರಾದೆ ಪೂಜ್ಯಗೊಳಿಸಿತೆಂಬಂತಿದ್ದ ಅವನು.
ಕಣ್ಣೊಳಗೆ ಬಿಳಿಯೆಲುಬು ತೊನೆಯುವುದ ಕಂಡೆ.

ವಿಶಾಲ ಮರಳುದಿನ್ನೆಗುಂಟ ಅವನ ಹಿಂದೆ ನಡೆದೆ,
ಮನಸು ಮಾಂಸದ ಕವಣೆಯೊಳಗೆ ಗುದ್ದಾಡುತ್ತಲಿತ್ತು.
ನಾನಿರುವ ಮನೆಯ ಸುಡುವುದೊಂದೇ ಉಳಿದ ನಿರೀಕ್ಷೆಯಾಗಿತ್ತು.

ನನ್ನ ತೋಳುಗಳಗುಂಟ ಮೌನ; ಅವನ ದೇಹ ಸಮುದ್ರದಿಂದ
ಬಲೆಯೊಳಗೆ ಹಿಡಿದುತಂದ ನೊರೆಗಳನ್ನು ಪರಚುತ್ತಿತ್ತು.
ಮಿಣುಕು ಬೆಳಕಲ್ಲಿ ಗಾಯದಂತೆ ಅವನ ಬಿಡಾರ ತೆರೆದುಕೊಂಡಿತು.
ನಾನೇ ಗಾಳಿ ಒಳಗೆ, ಹಾಗೂ ಮುಂಚಿನ ದಿನಗಳು ರಾತ್ರಿಗಳು.
ಸೋಗೆ ತೊಗಲನ್ನು ಸೋಕಿದವು. ಬಿಡಾರದೊಳಗೆ
ಎಣ್ಣೆಬತ್ತಿಯೊಂದು ಗೋಡೆಯ ಮೇಲೆ ತಾಸುಗಳನ್ನು ಕಿಸಿದಿತ್ತು.
ಮತ್ತೆ ಮತ್ತೆ ಜಿಗುಟು ಮಸಿ ಮನಸಿನವಕಾಶವ ತುಂಬಿತ್ತು.
ಅವನು ಹೇಳುತ್ತಿದ್ದ: ಬೇಗ ಬರ್ತೇನೆ, ನಿನ್ನ ಬಸ್ಸು ಒಂಬತ್ತಕ್ಕೆ.
ಬಾನು ಬಿತ್ತು ನನ್ನ ಮೇಲೆ ಹಾಗೂ ಅಪ್ಪನೊಬ್ಬನ ದಣಿದ ಕಪಟತನ.
ಉದ್ದಕ್ಕೆ ಸಪೂರವಿದ್ದ ಅವಳ ವಯಸ್ಸು ರಬ್ಬರಿನಂತೆ ತಣ್ಣಗಿತ್ತು.
ಹುಳುವಿನಂತ ಕಾಲಗಲಿಸಿದಳು. ಅಲ್ಲಿನ ಹಸಿವು ಅರಿತೆ,
ಆ ಇನ್ನೊಂದು ಹಸಿವು, ಮೀನಂತೆ ತಿಣುಕುತ್ತ ಒಳತಿರುಗಿತು.

– ಜಯಂತ ಮಹಾಪಾತ್ರ (Hunger)

ಜಯಂತ ಮಹಪಾತ್ರ ಇಂಗ್ಲೀಷಿನಲ್ಲಿ ಬರೆಯುವ ಒರಿಯಾ ಕವಿ. ತಮ್ಮ ಸೂಕ್ಷ್ಮ ಸಂವೇದಿ ಕವನಗಳಿಗೆ ಪ್ರಸಿದ್ಧರು. ಇವರ ಕವನಗಳಲ್ಲಿ ಓರಿಸ್ಸಾದ ನದಿನಾಡು-ನಡೆನುಡಿ-ನಾಡಿಮಿಡಿತವಾಗಿ ಬರುತ್ತವೆ. ತಡವಾಗಿ ಬರೆಯಲು ಶುರುಮಾಡಿದ ಜಯಂತ ಶೀಘ್ರ ಭಾರತದ ಒಳ್ಳೆಯ ಕವಿಗಳಲ್ಲಿ ಒಬ್ಬರೆಂದು ಹೆಸರಾದರು. ಭಾಷೆಯ ಚತುರ ಪ್ರಯೋಗ, ಸಾಮಾನ್ಯ ಜೀವನದ ಬಗೆ ಬಗೆಯ ನವೆಗಳನ್ನು ಚುರುಕು ತಾಗುವಂತೆ ಬರೆವ ಜಯಂತ ತಮ್ಮ ಕಾವ್ಯವನ್ನು ಅಂತಸ್ಸಾಕ್ಷಿಯ ಒರೆಗಲ್ಲಾಗಿ ಉಪಯೋಗಿಸುತ್ತಾರೆ. ನಮ್ಮ ಪರಿಸರದೊಳಗೆ ಕಾಣುವ ನಾನಾ ಕೀಟಲೆಯ ನಿತ್ಯಬದುಕಿನ ಬಗ್ಗೆ, ಬಡತನದ ಬೇಗೆಯಲ್ಲಿ ಸಿಲುಕಿ ನಲುಗಿದ ಒಂದಿಡೀ ತಲೆಮಾರಿನ ಬಗ್ಗೆ ಅವರ ಕವನಗಳಲ್ಲಿ ಸೂಕ್ಷ್ಮ ಪರೀಕ್ಷೆ ಇರುತ್ತದೆ. ಈ ಕವನದಲ್ಲಿ ಹಸಿವು ಶಬ್ದದ ಎರಡೂ ಅರ್ಥಗಳು ಪರಿಣಾಮಕಾರಿಯಾಗಿ ಬಂದಿವೆ. ಬಡತನದಿಂದ ಸೊರಗಿದ ತಂದೆಯೊಬ್ಬ ತನ್ನ ಮಗಳ ದೇಹಮಾರಿ ಹೊಟ್ಟೆಪಾಡು ಮಾಡುತ್ತಲಿದ್ದಾನೆ. ಕಾಮದ ಹಸಿವಿನ ತೃಪ್ತಿಗಾಗಿ ಹುಡುಕುತ್ತಿರುವ ಪ್ರವಾಸಿಗನೊಬ್ಬ ಇಲ್ಲಿ ನಿರೂಪಕ. ತಂದೆಯೇ ತನ್ನ ಆಡುವ ವಯಸ್ಸಿನ ಮಗಳನ್ನು ಸೂಳೆಯಾಗಿಸುವ, ಹಾಗೂ ಹಾಗೆ ಮಾಡಿ ಹಸಿವನ್ನು ಎದುರಿಸುವ ಭಯಾನಕ ಚಿತ್ರದೆದುರು ಆತನ ಕಾಮುಕತೆ ನಲುಗಿಬಿಡುತ್ತದೆ. ಮಾರ್ಮಿಕವಾದ ಈ ಕವನದಲ್ಲಿ ಒದಗುವ ಸಾಮಾಜಿಕ ಟೀಕೆ ಎಷ್ಟು ಸೂಕ್ಷ್ಮವಾಗಿ ಬಂದಿದೆ ನೋಡಿ.