ನುಡಿಬೀಡು

ವಿಲಿಯಂ ಶೇಕ್ಸ್ ಪಿಯರ್ – ಸಹಮನಸ್ಕರ ಮದುವೆಗೆ ಅಡಚಣೆಯ ತರಲಾರೆ

October 28, 2009 · Leave a Comment

ಸಹಮನಸ್ಕರ ಮದುವೆಗೆ ಅಡಚಣೆಯ ತರಲಾರೆ

ವಿಲಿಯಂ ಶೇಕ್ಸ್ ಪಿಯರ್ (ಸುನೀತ ೧೧೬)

ಸಹಮನಸ್ಕರ ಮದುವೆಗೆ ತಡೆಯ ತರಲಾರೆ
ನಾನು. ಪ್ರೀತಿಯದು ಪ್ರೀತಿಯಲ್ಲ ಕಂಡಂತೆ
ಬದಲಾದ ಪರಿಸರವ ತಾನೂ ಬದಲುತ್ತಲಿರೆ,
ಅಥವಾ ಪ್ರೇಮಿ ನಿಲುವಲ್ಲಿ ಪಲ್ಟಿಯಾದಂತೆ:

ಇಲ್ಲವೇ ಇಲ್ಲ! ಅದೊಂದು ಸದಾಸ್ಥಿರ ಚಿನ್ಹೆ
ಬಿರುಗಾಳಿಯೆದುರಿಗೂ ಕಂಪಿಸದಿರುವುದು.
ಅಲೆವ ನಾವೆಗಳಿಗೆಲ್ಲ ಅದುವೆ ಸ್ಥಾಯಿ ಚುಕ್ಕೆ
ದೂರವರಿತರೂ ಅದರ ಬೆಲೆಯರಿಯದಂತದ್ದು

ಪ್ರೀತಿಯಲ್ಲ ಕಾಲದ ಗುಲಾಮ, ಸುಂದರಾಂಗಗಳು
ಇದ್ದಾವೆ ಅವನ ಡೊಂಕು ಕುಡುಗೋಲಿನ ಅಂಕೆಯಲಿ
ಪ್ರೀತಿಯ ಬದಲಿಸದು ಅವನ ಕ್ಷಣಿಕ ತಾಸು ವಾರಗಳು
ನಾಶದಂಚಿನವರೆಗೂ ತಾಳುವುದು ಕೆಚ್ಚಿನಲಿ.

ರುಜುಮಾಡಿ ತೋರಿದರೆ ನನ್ನೀ ಮಾತು ತರವಲ್ಲ
ನಾನು ಕವಿಯೇ ಅಲ್ಲ, ಪ್ರೇಮಿಯೂ ಎಲ್ಲಿಲ್ಲ.

ಶೇಕ್ಸಪಿಯರನ ಬಹುಚರ್ಚಿತ ಸುನೀತಗಳಲ್ಲಿ ಇದು ಒಂದು. ಇಲ್ಲಿ ಆತ ನಿಜವಾದ ಪ್ರೀತಿ ಹೇಗೆ ಎಂದಿಗೂ ಬದಲದೇ, ದೃವತಾರೆಯಂತೇ ಸ್ಥಿರವಾಗಿಯೂ, ಹಾಗೂ ಅದರಂತೆ ದಿಕ್ಕ್ಸೂಚಿಯಾಗಿಯೂ ಇರುತ್ತದೆ ಎಂದು ವಾದಿಸುತ್ತಾನೆ. ಯುರೋಪಿನ ನವೋದಯ (renaissance) ಕಾಲದ ಆದರ್ಶವಾದೀ ಕಲ್ಪನೆಗಳ ಮಾದರಿಯಲ್ಲಿ ಇದೊಂದು ಉದಾಹರಣೆ. ಇಲ್ಲಿ ನಾವು ಆದರ್ಶವಾದದೊಂದಿಗೆ ಕಾಣುವ ಇನ್ನೊಂದು ಅಂಶವೆಂದರೆ ವಿಚಾರವೊಂದನ್ನು ಎತ್ತಿಕೊಂಡು ವಾದಿಸುತ್ತ ಹೋಗುವ ತಾರ್ಕಿಕ ಧಾಟಿ. ಹಾಗೆಯೇ ಅಂತ್ಯದಲ್ಲಿ ಬರುವ ನಾನು ಕವಿಯೇ ಅಲ್ಲ ಅನ್ನುವ ಮಾತು (i never writ) ಸೂಚಿಸುವಂತೆ ವ್ಯಕ್ತಿಯೊಬ್ಬನ ವಿಚಾರವೂ ಮುಖ್ಯ ಎಂಬ ವಿಶ್ವಾಸ. ಇವೆರಡನ್ನೂ ಯುರೋಪಿನ ನವೋದಯದ ಗುರುತಾಗಿ ಕಾಣುವುದು ವಾಡಿಕೆ. ಹೀಗೆ ಕಾವ್ಯದಲ್ಲಿ ತಾರ್ಕಿಕವಾಗಿ ವಾದಿಸುವ ಶೈಲಿ ಮುಂದೆ metaphysical ಕಾವ್ಯಕ್ಕೆ ದಾರಿ ಮಾಡುತ್ತದೆ; ಅಲ್ಲಿ ಇದು ಅತಿಯೆನ್ನುವ ಮಟ್ಟಿಗೆ ತಲುಪಿ ಶಬ್ದದೊಂದಿಗಿನ ಜಾಣ್ಮೆಯನ್ನು ತೋರುವ ಕವನಗಳೇ ಹೆಚ್ಚಾಗಿ ಬರೆಯಲಾಯಿತು.ಇಲ್ಲಿ, ಶೇಕ್ಸಪಿಯರ ಸಿನಿಕತನವನ್ನು ತೊರೆದ ಒಂದು ಆದರ್ಶ ಪ್ರೀತಿಯನ್ನು ಹೊಗಳುತ್ತಾನೆ. ಇಲ್ಲಿ ಮೊದಲ ಸಾಲಲ್ಲಿ ಬರುವ ‘ತಡೆ ತರುವ ವಿಚಾರ’ ಕ್ರಿಶ್ಚಿಯನ ಮದುವೆಗಳಲ್ಲಿ ಗಂಡು – ಹೆಣ್ಣು ದಂಪತಿಗಳೆಂದು ಸಾರುವ ಮೊದಲು ಯಾರಾದರೂ ಅವರು ದಂಪತಿಗಳಾಗಬಾರದು ಎಂದು ತಡೆ ತರಬಹುದಾದ ಆಚರಣೆ ಕುರಿತಾಗಿದೆ. ಆದರೆ ಇಲ್ಲಿ ‘ಮದುವೆ’ ಶಬ್ದ ಸೀಮಿತವಾದದ್ದಲ್ಲ. ಅದನ್ನು ಮಿಲನವೆಂದು ಕೂಡ ಅರ್ಥಿಸಿಕೊಳ್ಳಬಹುದಾಗಿದೆ. ಸಹಮನಸ್ಕರು (‘True minds’) ಕೂಡ ಪ್ರೇಮಿಗಳಿಗೆ ಉಪಯೋಗಿಸುವ ಸಾಮಾನ್ಯ ಶಬ್ದವಾಗದೇ, ಯಾರು ನಿಜವಾಗಿಯೂ ಪ್ರೇಮಿಸುವ ಯೋಗ್ಯತೆಯುಳ್ಳವರೋ ಅವರ ಕುರಿತಾಗಿದೆ. ಅಂದರೆ, ನಿಜ ಪ್ರೀತಿ ಎನ್ನುವುದನ್ನು ಮಾನಸಿಕ ಅವಸ್ಥೆಯ ಜತೆ ಜೋಡಿಸಿ, ಕವಿ ಪ್ರೀತಿಯಲ್ಲಿ ವೈಚಾರಿಕತೆಯ ಜರೂರಿಯನ್ನು ಸೂಚಿಸುತ್ತಾನೆ. ಹಾಗಾಗಿ, ನಾವು ಸಾಮಾನ್ಯವಾಗಿ ಶೇಕ್ಸಪಿಯರನನ್ನು ರಮ್ಯಕವಿಯಾಗಿ ಕಂಡರೂ, ಅವನಲ್ಲಿಯೂ ವೈಚಾರಿಕತೆಗಿದ್ದ ಒಲವು ಕಾಣಬಹುದಾಗಿದೆ. ಇದನ್ನು ಅನುವಾದ ಮಾಡುತ್ತ ನನ್ನ ಮನಸ್ಸಿನಲ್ಲಿ ಇದ್ದ ವಿಚಾರವೆಂದರೆ ಅನುವಾದಿತ ಕವನವು ಕನ್ನಡದ ಕವನವೆಂದೇ ತೋರುವಂತಾಗಬಾರದು ಎಂದು. ಅನುವಾದದ ಕುರಿತಾಗಿ ಇರುವ ಅನೇಕ ಭಿನ್ನಾಭಿಪ್ರಾಯಗಳಲ್ಲಿ ಇದು ಒಂದು: ಅನುವಾದ ಗುರಿ ಭಾಷೆಯಲ್ಲಿ ಒಂದಾಗಬೇಕೆಂಬುದಾಗಿ, ಯಾ ಮೂಲ ಭಾಷೆ ಬೇರೆ ಎಂಬುದನ್ನು ಓದುಗರಿಗೆ ಸದಾ ನೆನಪಿಸುತ್ತಲಿರಬೇಕೆಂಬುದಾಗಿ. ಹಾಗಾಗಿ ಇಂಗ್ಲೀಷಿನ ಸಾನೆಟ್ ಗೆ ಕನ್ನಡದಲ್ಲಿ ಸುನೀತವೆನ್ನುವುದು ಕೂಡ ಸರಿಯಲ್ಲವೇನೋ ಎಂದು ಕೆಲ ಬಾರಿ ಅನಿಸುತ್ತದೆ. ನನ್ನ ಈ ಅನುವಾದ ಒಂದು ಕಚ್ಚಾ ಪ್ರಯೋಗವಷ್ಟೇ. ಇದನ್ನು ಇತರರೂ ಕೂಡ ಅನುವಾದಿಸಿರಬಹುದು ಈ ಮೊದಲೇ. ನಾನು ಹುಡುಕಿ ನೋಡುವುದು ಬಾಕಿಯಿದೆ.

→ Leave a CommentCategories: ಅನುವಾದ · ಕವಿತೆ
Tagged: , , , ,

ಅಲ್ಲಮಪ್ರಭುವಿನ ಶಿಲೆಯೊಳಗಣ ಪಾವಕನಂತೆ

October 26, 2009 · Leave a Comment

‘ಶಿಲೆಯೊಳಗಣ ಪಾವಕನಂತೆ’

ಶಿಲೆಯೊಳಗಣ ಪಾವಕನಂತೆ

ಉದಕದೊಳಗಣ ಪ್ರತಿಬಿಂಬದಂತೆ

ಬೀಜದೊಳಗಣ ವೃಕ್ಷದಂತೆ

ಶಬ್ದದೊಳಗಣ ನಿಶ್ಶಬ್ದದಂತೆ

ಗುಹೇಶ್ವರ, ನಿಮ್ಮ ಶರಣ ಸಂಬಂಧ

ಅಲ್ಲಮಪ್ರಭುವಿನ ಈ ವಚನವನ್ನು ವಿಶ್ಲೇಷಿಸುತ್ತ ಚಿಂತಾಮಣಿ ಕೊಡ್ಲೆಕೆರೆಯವರು ಅನ್ನುತ್ತಾರೆ: “ಭಕ್ತ ಶಿಲೆಯಾದರೆ ಭಗವಂತ ಪಾವಕ, ಭಕ್ತ ಉದಕವಾದರೆ ದೇವರು ಅಲ್ಲಿ ಹುಟ್ಟುವ ಪ್ರತಿಬಿಂಬ… ಮುಂದಿನ ಸಾಲು ಭಗವಂತನನ್ನು ‘ಬೀಜದೊಳಗಣ ವೃಕ್ಷ’ವೆಂದು ಗುರುತಿಸುತ್ತದೆ.” ಇತ್ಯಾದಿ. ಇದು ಅವರ “ಅಂತರಂಗದ ಆಕಾಶ” ಎನ್ನುವ ಪುಸ್ತಕದಲ್ಲಿ ಬರುವ ಮಾತುಗಳು. ಈ ಪುಸ್ತಕ ತಾತ್ವಿಕತೆ ಹಾಗೂ ಕಾವ್ಯದ ಕುರಿತ ಸಂಬಂಧದ ಅಧ್ಯಯನವಾಗಿದ್ದು, ಕನ್ನಡ ವಿಮರ್ಶಾ ಲೋಕಕ್ಕೆ ಒಳ್ಳೆಯ ಕೊಡುಗೆಯಾಗಿದೆ.ಈ ವಚನವನ್ನು ಓದುತ್ತ ನನಗೆ ಒಂದು ಸಂದೇಹ. ಅಲ್ಲಮನ ತಾತ್ವಿಕ ವಿಚಾರಗಳ ಅರಿವಿಲ್ಲದ ನಾನು ಇದನ್ನು ಒಂದು ಕವನವಾಗಿಯಷ್ಟೇ ಓದುತ್ತಿದ್ದೇನೆ. ವಚನದ ಕೊನೆಯ ಸಾಲಿನ ಬಂಧ ನೋಡಿದರೆ, ಒಟ್ಟೂ ವಚನದಲ್ಲಿ ಬರುವ ಮೊದಲ ಶಬ್ದಗಳು, ಅಂದರೆ, ಶಿಲೆ, ಉದಕ, ಬೀಜ, ಶಬ್ದ, “ನಿಮ್ಮಶರಣ ಸಂಬಂಧ” ದ ‘ನಿಮ್ಮ’ದ ಜತೆ ಸೇರುತ್ತವೆ ಹಾಗೂ ಪಾವಕ, ಪ್ರತಿಬಿಂಬ, ವೃಕ್ಷ, ನಿಶ್ಶಬ್ದ, ಇವು ‘ಶರಣ’ದ ಜತೆ ಸೇರುವುದೆಂದು ಅನಿಸುತ್ತದೆ. ಅಂದರೆ ಶರಣ ಈ ವಚನದಲ್ಲಿ ಕೊಡ್ಲೆಕೆರೆಯವರು ಅನ್ನುವಂತೆ ಶಿಲೆಯಾಗಿ ಬಾರದೆ ಅದರೊಳಗಣ ಪಾವಕನಾಗಿ, ಹಾಗೂ ಗುಹೇಶ್ವರ ಶಿಲೆಯಾಗಿ ಬರುತ್ತಾರೆ. ಅಂತೆಯೇ ಉಳಿದ ಸಾಲುಗಳಲ್ಲಿ ಕೂಡ. ಹೀಗೆ ನೋಡಿದಾಗ ಪ್ರಾಥಮಿಕತೆ ಬರೀ ತೋರಿಕೆಗಷ್ಟೇ ಅಲ್ಲದೇ ಅರ್ಥದಲ್ಲಿಯೂ ಗುಹೇಶ್ವರನಿಗೆ ಸಲ್ಲುತ್ತದೆ. ಅಂದರೆ, ಶಿಲೆ ಗುಹೇಶ್ವರನಾದರೆ, ಅದರೊಳಗಿರಬಹುದಾದ ಅಂಶಗಳಲ್ಲಿ ಶರಣನೂ ಒಂದು. ಉದಕ ಗುಹೇಶ್ವರನಾದರೆ ಆತನೇ ಇಡೀ ವಿಶ್ವವನ್ನು ಒಳಗೊಂಡಂತೇ ಪ್ರತಿಬಿಂಬಿಸುವನು; ಬೀಜ ಗುಹೇಶ್ವರನಾದರೆ ಶರಣನೆಂಬ ವೃಕ್ಷದ ಹುಟ್ಟಿನ ಮೂಲವೇ ಅವನಾಗುತ್ತಾನೆ. ಶಬ್ದ ಗುಹೇಶ್ವರನಾದರೆ ಅರ್ಥವಂತಿಕೆಯ ಅಂಶವಾದ ನಿಶ್ಶಬ್ದ ಶರಣನಾಗಿರುತ್ತಾನೆ. ಹಾಗೂ ಈ ಸಮೀಕರಣದಲ್ಲಿ ಮೊದಲು ಬರುವ ಅಂಶಗಳು ಹೆಚ್ಚಿನ ವ್ಯಾಪ್ತತೆ ಪಡೆದಿದ್ದು ದೈವಶಕ್ತಿಯ ವಿಶಾಲತೆ ಪಡೆಯುತ್ತವೆ. ಅಂತೆಯೇ, ಅವು ನಿತ್ಯವಾಗಿದ್ದಾದರೆ, ಅವನ್ನು ಅವಲಂಬಿಸಿರುವ ಎರಡನೆಯ ಘಟಕಗಳು ಅನಿತ್ಯ. ನಂತರ ಬರುವ ಅಂಶಗಳು ಒಂದು ಘಟಕವಷ್ಟೇ ಆಗಿ ಮೊದಲಿನ ಘಟಕದಲ್ಲಿಯೇ ಲೀನವಾಗುವ ಅಂಶವಾಗುತ್ತವೆ.ಈ ವಚನದ ರಚನಾ ಬಂಧ ನೋಡಿದರೆ ಕೂಡ ಹೀಗೆ ಓದುವುದು ಸಾಧ್ಯವೆನಿಸುತ್ತದೆ. ಏಕೆಂದರೆ ‘ಒಳಗಣ’ ಎಂಬ ಪದವು ಮೊದಲು ಬರುವ ಪದಗಳ ಜತೆ ಇದೆ. ಅಂದರೆ ‘ಒಳಗೊಳ್ಳುವ’ ವ್ಯಾಪ್ತಿ ಆ ಪದಗಳು ಸೂಚಿಸುವ ವಸ್ತುಗಳೊಂದಿಗೆ ಇವೆ. ಶಿಲೆಗೆ ಒಳಗೊಳ್ಳುವ ವ್ಯಾಪ್ತಿಯಿದೆ, ಉದಕಕ್ಕೆ ಪ್ರತಿಬಿಂಬವನ್ನು ಒಳಗೊಳ್ಳುವ ವ್ಯಾಪ್ತಿ ಇದೆ…ಇತ್ಯಾದಿ. ಹೀಗೆ ಒಳಗೊಳ್ಳುವ ವ್ಯಾಪ್ತಿ ಇರುವುದೇ ಗುಹೇಶ್ವರನ ಪ್ರಾಥಮಿಕತೆಯನ್ನು ಸೂಚಿಸುವುದರಿಂದ ಶರಣ ಆತನಲ್ಲಿ ಒಳಗೊಳ್ಳುವದನ್ನು ಬಯಸುತ್ತಾನೆ. ಇನ್ನೊಮ್ಮೆ ಓದಿದರೆ ಅನಿಸುತ್ತದೆ: ‘ಶಿಲೆಯೊಳಗಣ ಪಾವಕದಂತೆ’ ಇರುವುದು ಏನೆಂದು ಅಲ್ಲಮಪ್ರಭು ಹೇಳುತ್ತಿದ್ದಾನೆ? ‘ನಿಮ್ಮ ಶರಣ ಸಂಬಂಧ’ ಎಂದು. ಅಂದರೆ, ಇಲ್ಲಿ ಶಿಲೆ ಪಾವಕಗಳು ಅಮುಖ್ಯ ಹಾಗೂ ‘ಒಳಗಣ’ ಮುಖ್ಯ. ಅಂದರೆ, ಶಿಲೆ ಗುಹೇಶ್ವರನೆಂದಾಗಲೀ, ಪಾವಕ ಶರಣನೆಂದಾಗಲೀ ನೋಡುವ ಬದಲು ಇವೆರಡರ ನಡುವಿನ ಸಂಬಂಧವಷ್ಟೇ ಉಪಮೆಯಾಗಿ ಬರುತ್ತದೆ. ಶಿಲೆ ಹಾಗೂ ಪಾವಕ ಆ ಉಪಮೆಯನ್ನು ಸಾಧ್ಯಗೊಳಿಸುವ ಘಟಕಗಳು ಮಾತ್ರ. ಅಂದರೆ, ಗುಹೇಶ್ವರ ಹಾಗೂ ಶರಣರ ಸಂಬಂಧಕ್ಕೂ, ಶಿಲೆಯೊಳಗೆ ಕಾಣದೆಯೂ ಹೂತಿರುವ ಪಾವಕಕ್ಕೂ ಸಂಬಂಧ ಬರುವುದು ಒಳಗೊಳ್ಳುವ ಅರ್ಥವನ್ನು ಗಮನಿಸಿದಾಗ ಮಾತ್ರ. ಹಾಗಾಗಿ, ಶಿಲೆಯೊಳಗೆ ಸದಾಸಾಧ್ಯವಿರುವ ಪಾವಕ, ನೀರಿನಲ್ಲಿ ಸದಾಸಾಧ್ಯವಿರುವ ಬಿಂಬ, ಬೀಜದಲ್ಲಿ ಸದಾಸಾಧ್ಯವಿರುವ ವೃಕ್ಷ, ಶಬ್ದದಲ್ಲಿ ಸದಾಸಾಧ್ಯವಿರುವ ನಿಶ್ಶಬ್ದದಂತೇ, ಶರಣರು ಗುಹೇಶ್ವರನೊಳಗೇ ಇರುವ ಅಂಶವಾಗಿ ಸಾಬೀತಾಗುತ್ತಾರೆ. ಶಿಲೆಯೊಳಗೆ ಪಾವಕವೇ ಹೊರತು, ಪಾವಕದೊಳಗೆ ಶಿಲೆಯಲ್ಲ. ಹಾಗಾದರೆ, ಗುಹೇಶ್ವರನೊಳಗೆ ಶರಣನಿದ್ದಾನೆ; ಶರಣನೊಳಗೆ ಗುಹೇಶ್ವರನಿಲ್ಲವೇ? ‘ಒಳಗಣ’ ಎನ್ನುವ ಸಂಬಂಧ ಪರಸ್ಪರವಲ್ಲವೇ? ಶರಣನೊಳಗೆ ಗುಹೇಶ್ವರನನ್ನು ಬರಮಾಡಿಕೊಳ್ಳುವುದೇ ಶರಣನ ಭಕ್ತಿಯ ಉದ್ದೇಶವಾದ್ದರಿಂದ, ಅದು ಈಗಾಗಲೇ ಇರುವ ಸ್ಥಿತಿಯಾಗಲಾರದು. ಈ ವಚನ ಸೂಚಿಸುವ ಭಕ್ತಿಯ ಮೂಲಕ ಆ ಸ್ಥಿತಿಗೆ ಶರಣ ತಲುಪುವ ಆಸೆ ಹೊಂದಿದ್ದಾನೆ. ಇಲ್ಲಿ ಸಂಬಂಧವನ್ನು ಅವಲಂಬನೆಯಾಗಿ ನೋಡಲಾಗಿರುವುದನ್ನು ಗಮನಿಸಬೇಕು. ಗುಹೇಶ್ವರನ ಅವಲಂಬಿಸಿ ಶರಣನಿದ್ದಾನೆ. ಇಲ್ಲಿನ ಉಪಮೆಗಳನ್ನು ಇನ್ನೂ ಗಂಭೀರವಾಗಿ ತಗೊಳ್ಳಬಹುದು. ಅವು ಆರೋಪಿಸುವ ಮಿತಿಯನ್ನು ನೋಡಬೇಕು. ಶರಣನು ಶಿಲೆಯೊಳಗಣ ಪಾವಕದಂತಿದ್ದಾನೆ; ಆದರೆ ಪಾವಕ ಶಿಲೆಯ ಹೊರತೂ ಇದ್ದೀತು. ಅಂದರೆ, ಶಿಲೆಯೊಳಗೇ ಇರಬೇಕಾದುದು ಪಾವಕದ ಇರವಿನ ಕಡ್ಡಾಯ ಸ್ಥಿತಿಯಲ್ಲ. ಹಾಗೆಯೇ ಇತರ ಉಪಮೆಗಳಲ್ಲೂ ಕೂಡ. ಹಾಗಾದರೆ, ಶಿಲೆಯ ಹೊರತಾಗಿ ಪಾವಕವಿದೆಯಾದರೆ ಶಿಲೆಯ ಮಹತ್ವವೇನಿದ್ದೀತು? ಇಲ್ಲಿ, ಒಳಗಣ ಶಬ್ದದ ಒತ್ತಡ ಕೆಲಸ ಮಾಡುತ್ತದೆ. ಅಂದರೆ, ಎಲ್ಲಿಯೂ ಇರಬಹುದಾದ ಪಾವಕ ಶಿಲೆಯೊಳಗಿನದಾಗಿದ್ದರೆ, ಅದನ್ನು ಹೊಮ್ಮಿಸುವ ಕಲೆ ಶಿಲೆಗೆ ಮಾತ್ರ ಸಾಧ್ಯ. ಎಲ್ಲಿಯೂ ಇರಬಹುದಾದ ಶರಣ ಗುಹೇಶ್ವರನೊಂದಿಗಿದ್ದರೆ ಅವನಿಗೆ ಒಳಿತು. ಶರಣನ ವ್ಯಕ್ತಿತ್ವ ಎಲ್ಲಿಯೂ ಪ್ರತಿಫಲಿತವಾಗಬಹುದಾಗಿದ್ದರೂ, ಅದು ಗುಹೇಶ್ವರನೆಂಬ ಉದಕದಲ್ಲಿ ಪ್ರತಿಫಲಿತವಾದರೆ ಶರಣನಿಗೆ ಒಳಿತು… ಇತ್ಯಾದಿ. ಅಂದರೆ ಶರಣನಿಗೆ ಸ್ವಾತಂತ್ರ್ಯವಿದೆ ತನ್ನ ಇರವನ್ನು ಹಾಗೆಯೇ ತನ್ನ ಇಷ್ಟದೇವವನ್ನು ಆಯಲು ಸಹ. ಹಲವು ಆಯ್ಕೆಗಳಲ್ಲಿ ಕವಿ ಈ ಆಯ್ಕೆ ಒಳಿತು ಅನ್ನುವ ಮತ ಹೊಂದಿದ್ದಾನೆ.ಬೆಂಕಿಗೆ ಹೋಲಿಸಿದರೆ ಶಿಲೆ ಸ್ಥಾಯಿಗುಣವಿದೆ. ಪ್ರತಿಬಿಂಬಕ್ಕೆ ಹೋಲಿಸಿದರೆ ಉದಕ ಹೆಚ್ಚು ಮೂರ್ತ. ವೃಕ್ಷಕ್ಕೆ ಹೋಲಿಸಿದರೆ ಬೀಜ ಕಾಣದೆಯೇ ಸೃಜಿಸುವ ಗುಣದ್ದಾಗಿದೆ. ನಿಃಶ್ಶಬ್ದ ಸ್ಥಿತಿಯಿಲ್ಲದ್ದು, ಅಥವಾ ನಿಜವಲ್ಲದ್ದು, ಅಭಾವವನ್ನು ಸೂಚಿಸುವಂತದ್ದು.ಕೊನೆಯ ಸಾಲು ಸೂಚಿಸುವ ಸಮಸ್ಯೆಯೆಂದರೆ: ವಾಚಿಸುವಾತ ಈ ವಚನದೊಳಗಿಲ್ಲ. ಆತ ಮೂರನೆಯವ. ಆತ ‘ನಿಮ್ಮ’ ಹಾಗೂ ‘ಶರಣ’ ರ ಸಂಬಂಧವನ್ನು ಬಣ್ಣಿಸಿದ್ದಾನೆ. ನಿಮ್ಮ-ನಮ್ಮ ಸಂಬಂಧವನ್ನಲ್ಲ. ತನ್ನದೇ ಅನುಭವವನ್ನು ಹೇಳುತ್ತಿದ್ದರೆ ಈ ಸಂಬಂಧದ ಸಮೀಕರಣದಲ್ಲಿ ವಾಚಕ ಯಾಕೆ ಕಾಣೆಯಾಗಿದ್ದಾನೆ?

→ Leave a CommentCategories: Kannada Poetry

ಶೇಕ್ಸಪಿಯರ – ಆತ್ಮ, ಪಾಪಿ ಭೂಮಿಯ ಕೇಂದ್ರ

October 23, 2009 · Leave a Comment

ಆತ್ಮ, ಪಾಪಿ ಭೂಮಿಯ ಕೇಂದ್ರ
ಶೇಕ್ಸಪಿಯರ

ಪಾಪ, ಆತ್ಮ, ನನ್ನ ಈ ಪಾಪಿ ನೆಲದ ಕೇಂದ್ರವೆ
ಯಾಕೆ ಹೂತಿರುವೆ ಈ ಬಂಡುಕೋರರ ನಡುವಲ್ಲಿ
ಯಾಕೆ ಒಳಗೊಳಗೇ ಸೊರಗುವೆ, ಕೊರಗ ಸಹಿಸುವೆ
ಹೊರಗೋಡೆಗಳನು ಸಿಂಗರಿಸಿ ಅದ್ದೂರಿ ಬಣ್ಣದಲಿ?

ಯಾಕಿಷ್ಟು ಧಾರಾಳ ಕಾಸು ಇಷ್ಟು ತುಸುಗಾಲಕ್ಕೆ
ಪಡೆದ ಈ ಮಂಕು ಮಹಲಿಗಾಗಿ ಹೀಗೆ ವ್ಯಯಿಸುವುದು?
ಹುಳುಗಳೇ ನಾಳೆ ವಾರಸುದಾರರು ನಿನ್ನೀ ವೈಭವಕ್ಕೆ
ತಿನ್ನವೇನು ಅದನು? ಹೀಗೇ ತಾನೆ ದೇಹ ಕೊನೆಯಗುವುದು?

ಕಾರಣ ಆತ್ಮವೇ, ಬಾಳು, ಹೇರಿ ಎಲ್ಲ ನಷ್ಟ ಆಳಿನ ಮೇಲೆ
ಸವೆಯುತ್ತ ಆತ ನಿನ್ನ ಗೋದಾಮನ್ನು ಕೊಬ್ಬಿಸುವ
ಕೊಳ್ಳು ದೈವಿಕ ಮುದ್ದತು, ಮಾರಿ ಗಂಟೆಗಟ್ಟಳೆ ಕೊಳೆ
ಪೋಷಿಸು ಅಂತರಂಗವ, ಇನ್ನಿರದಂತೆ ಹೊರ ವೈಭವ;

ಮಾನವರ ಸೇವಿಸುವ ಆ ಸಾವನ್ನೇ ಸೇವಿಸುವಂತೆ
ಸಾವು ಬಂದರೆ ಒಮ್ಮೆ ಮತ್ತೆ ಸಾವೆಂದೂ ಬರದಂತೆ

ಶೇಕ್ಸಪಿಯರನ ೧೪೬ನೇ ಸುನೀತ ದೇಹ ಹಾಗೂ ಆತ್ಮದ ಕುರಿತಿದ್ದು, ಭೌತಿಕವನ್ನು ತಿರಸ್ಕರಿಸಿ ಆಧ್ಯಾತ್ಮಿಕವನ್ನು ಅಪ್ಪುಕೊಳ್ಳುವ ತರ್ಕವನ್ನು ಆತ್ಮಕ್ಕೆ ಸಂಭೋಧಿಸಿ ಪ್ರಸ್ತುತಪಡಿಸುತ್ತದೆ. ಇಲ್ಲಿ ಬರುವ ವಿಷಯ ಕಾವ್ಯ ವಸ್ತುವಾಗಿ ಹೊಸದಲ್ಲ (ಹಾಗೆ ನೋಡಿದರೆ ಶೇಕ್ಸಪಿಯರ ಹೊಸವಸ್ತುವಿನ ಹುಡುಕಾಟ ಮಾಡುವಾತನೇ ಅಲ್ಲ). ಇದೊಂದು ಚರ್ವಿತ ಚರ್ವಣ ವಸ್ತು ಹಾಗೂ ವಾದ. ದೇಹ ಕ್ಷಣಿಕ, ಆತ್ಮ ಸಾರ್ವಕಾಲಿಕ ಎಂಬುದೇ ಇಲ್ಲಿಯ ತಥ್ಯ. ಎಂದಿನಂತೇ ಇಲ್ಲಿ ತಥ್ಯದ ಸ್ತರದಲ್ಲಿ ಕಾಣದ ಜಾಣ್ಮೆ ಕಾವ್ಯಬಂಧದಲ್ಲಿ ಕಾಣುತ್ತದೆ. ಇಲ್ಲಿನ ರೂಪಕಗಳು ಮುಖ್ಯವಾಗಿ ವಾಣಿಜ್ಯ ವಲಯದಿಂದ ಬಂದಿದೆ ಎನ್ನುವುದು ಗಮನಾರ್ಹ. ಅಂದರೆ, ಭೌತಿಕ ಜೀವನ ಕ್ಷುಲ್ಲಕ ವೆನ್ನುವ ಮಾತೆಲ್ಲವೂ ಅಲಂಕೃತವಾಗಿವೆ, ಅದೂ ಕೂಡ ಕೊಡುಕೊಳ್ಳುವಿಕೆಯ ರೂಪಕಗಳಲ್ಲಿ. ಹಾಗಾಗಿ ಈ ಸುನೀತದಲ್ಲಿ ಬರುವ ರೂಪಕಗಳ ನುಗ್ಗಾಟವಿರುವುದು ಹಣಕ್ಕೆ ಸಂಬಂಧಿಸಿದ ಅಂದರೆ ಭೌತಿಕ ಜೀವನದ ಅಗತ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ. ಹೇಳುತ್ತಿರುವ ಮಾತು ಅದರ ತದ್ವಿರುದ್ಧ ದಿಕ್ಕಿನಲ್ಲಿ. ಹೀಗೆ ಪರಸ್ಪರ ವಿರೋಧಿ ವಸ್ತುವನ್ನು ಆಯ್ದುಕೊಂಡು ಕವಿ ದ್ವಂದ್ವ ತುಳುಕುವ ಶೈಲಿಯಲ್ಲಿ ತನ್ನ ಕವನವನ್ನು ಹೆಣೆದಾಗ ಕಾಣಬರುವ ಸೊಬಗೆಂದರೆ ಭಾಷೆಯ ಸ್ತರದಲ್ಲಿಯೇ ಇಂಥಹ ವೈರುಧ್ಯಗಳನ್ನು ಲೇವಡಿ ಮಾಡಿಬಿಡುವ ತುಂಟತನ. ಅದೆಷ್ಟೋ ವರ್ಷಗಳಿಂದ ಓದುಗರು ಈ ಸುನೀತವನ್ನು ಆತ್ಮದ ಹೆಚ್ಚುಗಾರಿಕೆಯ ಕುರಿತಾದ್ದು ಎಂದು ಪರಿಗಣಿಸಿ ಓದುತ್ತಿದ್ದಾರೆ. ಆದರೆ, ಆ ತುಂಟ ಕವಿ ನಗುತ್ತಾನೆ: ದೇಹ ಹೆಚ್ಚೋ, ಆತ್ಮ ಹೆಚ್ಚೋ ಎನ್ನುವ ನುಗ್ಗಾಟ ನಡೆಸಿ ನೀವು; ನಾನು ಮಾತ್ರ ಇಂಥಹ ದ್ವಂದ್ವಗಳ ಕಿರುಕುಳ ಬಗ್ಗೆ ಉಪಹಾಸ ಮಾಡಿಬಿಡುವೆ!

→ Leave a CommentCategories: ಅನುವಾದ · ಕವಿತೆ
Tagged: , , , ,

ಜಯಂತ ಮಹಾಪಾತ್ರ – ಹಸಿವು

October 22, 2009 · Leave a Comment

ದೇಹದಾಹದ ಸೆಳವು ನನ್ನಲ್ಲಿ ಇಷ್ಟೆಂದು ನಂಬಲಾರೆ;
ಮೀನುಗಾರನೆಂದ ಅಸಡ್ಡೆಯಿಂದ: ಬೇಕಾ ನಿನಗೆ ಅವಳು.
ನರಜಾಲದಂತೆ ಅವನ ಹಿಂದೆಳೆವ ಬಲೆ; ಶಬ್ದಗಳೇ
ತನ್ನ ಉಳಿವಿನ ಇರಾದೆ ಪೂಜ್ಯಗೊಳಿಸಿತೆಂಬಂತಿದ್ದ ಅವನು.
ಕಣ್ಣೊಳಗೆ ಬಿಳಿಯೆಲುಬು ತೊನೆಯುವುದ ಕಂಡೆ.

ವಿಶಾಲ ಮರಳುದಿನ್ನೆಗುಂಟ ಅವನ ಹಿಂದೆ ನಡೆದೆ,
ಮನಸು ಮಾಂಸದ ಕವಣೆಯೊಳಗೆ ಗುದ್ದಾಡುತ್ತಲಿತ್ತು.
ನಾನಿರುವ ಮನೆಯ ಸುಡುವುದೊಂದೇ ಉಳಿದ ನಿರೀಕ್ಷೆಯಾಗಿತ್ತು.

ನನ್ನ ತೋಳುಗಳಗುಂಟ ಮೌನ; ಅವನ ದೇಹ ಸಮುದ್ರದಿಂದ
ಬಲೆಯೊಳಗೆ ಹಿಡಿದುತಂದ ನೊರೆಗಳನ್ನು ಪರಚುತ್ತಿತ್ತು.
ಮಿಣುಕು ಬೆಳಕಲ್ಲಿ ಗಾಯದಂತೆ ಅವನ ಬಿಡಾರ ತೆರೆದುಕೊಂಡಿತು.
ನಾನೇ ಗಾಳಿ ಒಳಗೆ, ಹಾಗೂ ಮುಂಚಿನ ದಿನಗಳು ರಾತ್ರಿಗಳು.
ಸೋಗೆ ತೊಗಲನ್ನು ಸೋಕಿದವು. ಬಿಡಾರದೊಳಗೆ
ಎಣ್ಣೆಬತ್ತಿಯೊಂದು ಗೋಡೆಯ ಮೇಲೆ ತಾಸುಗಳನ್ನು ಕಿಸಿದಿತ್ತು.
ಮತ್ತೆ ಮತ್ತೆ ಜಿಗುಟು ಮಸಿ ಮನಸಿನವಕಾಶವ ತುಂಬಿತ್ತು.
ಅವನು ಹೇಳುತ್ತಿದ್ದ: ಬೇಗ ಬರ್ತೇನೆ, ನಿನ್ನ ಬಸ್ಸು ಒಂಬತ್ತಕ್ಕೆ.
ಬಾನು ಬಿತ್ತು ನನ್ನ ಮೇಲೆ ಹಾಗೂ ಅಪ್ಪನೊಬ್ಬನ ದಣಿದ ಕಪಟತನ.
ಉದ್ದಕ್ಕೆ ಸಪೂರವಿದ್ದ ಅವಳ ವಯಸ್ಸು ರಬ್ಬರಿನಂತೆ ತಣ್ಣಗಿತ್ತು.
ಹುಳುವಿನಂತ ಕಾಲಗಲಿಸಿದಳು. ಅಲ್ಲಿನ ಹಸಿವು ಅರಿತೆ,
ಆ ಇನ್ನೊಂದು ಹಸಿವು, ಮೀನಂತೆ ತಿಣುಕುತ್ತ ಒಳತಿರುಗಿತು.

– ಜಯಂತ ಮಹಾಪಾತ್ರ (Hunger)

ಜಯಂತ ಮಹಪಾತ್ರ ಇಂಗ್ಲೀಷಿನಲ್ಲಿ ಬರೆಯುವ ಒರಿಯಾ ಕವಿ. ತಮ್ಮ ಸೂಕ್ಷ್ಮ ಸಂವೇದಿ ಕವನಗಳಿಗೆ ಪ್ರಸಿದ್ಧರು. ಇವರ ಕವನಗಳಲ್ಲಿ ಓರಿಸ್ಸಾದ ನದಿನಾಡು-ನಡೆನುಡಿ-ನಾಡಿಮಿಡಿತವಾಗಿ ಬರುತ್ತವೆ. ತಡವಾಗಿ ಬರೆಯಲು ಶುರುಮಾಡಿದ ಜಯಂತ ಶೀಘ್ರ ಭಾರತದ ಒಳ್ಳೆಯ ಕವಿಗಳಲ್ಲಿ ಒಬ್ಬರೆಂದು ಹೆಸರಾದರು. ಭಾಷೆಯ ಚತುರ ಪ್ರಯೋಗ, ಸಾಮಾನ್ಯ ಜೀವನದ ಬಗೆ ಬಗೆಯ ನವೆಗಳನ್ನು ಚುರುಕು ತಾಗುವಂತೆ ಬರೆವ ಜಯಂತ ತಮ್ಮ ಕಾವ್ಯವನ್ನು ಅಂತಸ್ಸಾಕ್ಷಿಯ ಒರೆಗಲ್ಲಾಗಿ ಉಪಯೋಗಿಸುತ್ತಾರೆ. ನಮ್ಮ ಪರಿಸರದೊಳಗೆ ಕಾಣುವ ನಾನಾ ಕೀಟಲೆಯ ನಿತ್ಯಬದುಕಿನ ಬಗ್ಗೆ, ಬಡತನದ ಬೇಗೆಯಲ್ಲಿ ಸಿಲುಕಿ ನಲುಗಿದ ಒಂದಿಡೀ ತಲೆಮಾರಿನ ಬಗ್ಗೆ ಅವರ ಕವನಗಳಲ್ಲಿ ಸೂಕ್ಷ್ಮ ಪರೀಕ್ಷೆ ಇರುತ್ತದೆ. ಈ ಕವನದಲ್ಲಿ ಹಸಿವು ಶಬ್ದದ ಎರಡೂ ಅರ್ಥಗಳು ಪರಿಣಾಮಕಾರಿಯಾಗಿ ಬಂದಿವೆ. ಬಡತನದಿಂದ ಸೊರಗಿದ ತಂದೆಯೊಬ್ಬ ತನ್ನ ಮಗಳ ದೇಹಮಾರಿ ಹೊಟ್ಟೆಪಾಡು ಮಾಡುತ್ತಲಿದ್ದಾನೆ. ಕಾಮದ ಹಸಿವಿನ ತೃಪ್ತಿಗಾಗಿ ಹುಡುಕುತ್ತಿರುವ ಪ್ರವಾಸಿಗನೊಬ್ಬ ಇಲ್ಲಿ ನಿರೂಪಕ. ತಂದೆಯೇ ತನ್ನ ಆಡುವ ವಯಸ್ಸಿನ ಮಗಳನ್ನು ಸೂಳೆಯಾಗಿಸುವ, ಹಾಗೂ ಹಾಗೆ ಮಾಡಿ ಹಸಿವನ್ನು ಎದುರಿಸುವ ಭಯಾನಕ ಚಿತ್ರದೆದುರು ಆತನ ಕಾಮುಕತೆ ನಲುಗಿಬಿಡುತ್ತದೆ. ಮಾರ್ಮಿಕವಾದ ಈ ಕವನದಲ್ಲಿ ಒದಗುವ ಸಾಮಾಜಿಕ ಟೀಕೆ ಎಷ್ಟು ಸೂಕ್ಷ್ಮವಾಗಿ ಬಂದಿದೆ ನೋಡಿ.

→ Leave a CommentCategories: ಅನುವಾದ · ಕವಿತೆ

ಗೆಬ್ರಿಯಲ್ ಒಕಾರಾ – ಒಂದಾನೊಂದು ಕಾಲದಲ್ಲಿ

October 22, 2009 · Leave a Comment

ಮಗು,
ಒಂದಾನೊಂದು ಕಾಲದಲ್ಲಿ
ಅವರು ಎದೆಯಾಳದಿಂದ ನಗುತ್ತಿದ್ದರು
ಮತ್ತು ನಗು ಕಣ್ಣುಗಳಲಿದ್ದವು;
ಆದರೀಗ, ಅವರು ಬರಿದೆ ಹಲ್ಲು ತೋರಿಸುತ್ತಾರೆ
ಅವರ ಮಂಜಿನಂತ ತಣ್ಣಗಿನ ಕಣ್ಣುಗಳು
ಹುಡುಕುತ್ತವೆ ನನ್ನ ನೆರಳುಗಳ ಹಿಂದೆ.

ನಿಜವಾಗೂ, ಒಂದು ಕಾಲದಲ್ಲಿ
ಅವರು ಎದೆಯಾಳದಿಂದ ಕೈಕುಲುಕುತ್ತಿದ್ದರು,
ಮಗು, ಅದೀಗ ಮುಗಿದ ಕಾಲ;
ಈಗವರು ಕೈಕುಲುಕುತ್ತಾರೆ ಅರೆಮನಸಲ್ಲಿ
ನನ್ನ ಖಾಲಿಕಿಸೆಯನ್ನು ತಡಕುತ್ತಾವೆ ಅವರ ಕೈಗಳು.

ಬನ್ನಿ ಮನೆಗೆ ಮತ್ತೆ, ಆರಾಮಾಗಿರಿ, ಅಂತಾರೆ.
ಮನೆಗೆ ಹೋದರೆ, ಅಲ್ಲಿ ಆರಾಮಿಸಿದರೆ, ಒಮ್ಮೆ,
ಇನ್ನೊಮ್ಮೆ – ಅಷ್ಟೆ ಮತ್ತೊಮ್ಮೆ ಹೋಗುವಂತಿಲ್ಲ
ಬಾಗಿಲು ಮುಚ್ಚಿರುತ್ತದೆ ನಾ ಬಂದರೆ.

ಹಾಗಾಗಿ ಮಗು, ನಾನು ಹಲವು ವಿಷಯ ಕಲಿತಿದ್ದೇನೆ:
ಬಟ್ಟೆಯಂತೆ ಮುಖ ಬದಲಿಸಲು -
ಮನೆ ಮುಖ, ಕಛೇರಿ ಮುಖ, ಬೀದಿ ಮುಖ,
ಗೃಹಸ್ಥನ ಮುಖ, ಸಮಾರಂಭಗಳ ಮುಖ -
ಆ ಎಲ್ಲ ಮುಖಗಳಲ್ಲಿ ಬಗೆಬಗೆಯ ನಗೆಯನ್ನು
ನಿಕ್ಕಿಗೊಳಿಸಿದ್ದೇನೆ,
ನಾನೂ ಕೂಡ ನಗುವಾಗ ಬರಿತೆ ಹಲ್ಲು ಕಿರಿಯುವುದ
ಮನಸಿಲ್ಲದೇ ಕೈಕುಲುಕುವುದ ಕಲಿತಿದ್ದೇನೆ;
‘ಮತ್ತೆ ಬನ್ನಿ’ ಅನ್ನುತ್ತೇನೆ, ಮನಸಲ್ಲಿ ‘ತೊಲಗು ಶನಿ’ ಅನ್ನುತ್ತ;
‘ಕಂಡು ಸಂತೋಷ’ ಅನ್ನುತ್ತೇನೆ ಸಂತೋಷವಿಲ್ಲದೇ,
ಹಾಗೂ, ತಲೆಚಿಟ್ಟಾಗಿದ್ದರೂ, ‘ನಿಮ್ಮ ಜತೆ ಮಾತಾಡಿ ಖುಷಿಯಾಯಿತು’ ಅನ್ನುತ್ತೇನೆ.

ನಂಬು ಮಗುವೇ,
ನಾನು ಮತ್ತೆ ನಾನಾಗಬೇಕು,
ನಿನ್ನ ಹಾಗಿದ್ದಾಗ ನಾನಿದ್ದಂತೆ;
ಈ ಮೂಕಗೊಳಿಸುವ ಕಲಿಕೆಯೆಲ್ಲ ತೊರೆಯಬೇಕು;
ಎಲ್ಲಕ್ಕಿಂತ ಹೆಚ್ಚಾಗಿ, ನಾನು ಮತ್ತೆ ಕಲಿಯಬೇಕು
ನಗುವುದನ್ನು;
ಕನ್ನಡಿಯೆದುರು ನನ್ನ ನಗೆಯಲ್ಲಿ
ಈಗ ನಾನು ಹಾವಿನ ಹಲ್ಲುಗಳನ್ನಷ್ಟೇ ಕಾಣುತ್ತಿದ್ದೇನೆ!

ತೋರು ನನ್ನ ಮಗುವೇ,
ನಗುವ ಬಗೆಯನ್ನು:
ತೋರಿಸು
ನಾನು ಒಂದು ಕಾಲದಲ್ಲಿ ನಿನ್ನಂತೆ ಇದ್ದಾಗ
ನಗುತ್ತಿದ್ದುದನ್ನು
ಕಲಿಸು ಮಗುವೆ.

——- ಗೆಬ್ರಿಯಲ್ ಒಕಾರಾ (Once upon a time)

→ Leave a CommentCategories: ಅನುವಾದ · ಕವಿತೆ
Tagged: , , ,

ಚಿನುವಾ ಅಚೀಬೆ – ನಿರಾಶ್ರಿತ ತಾಯಿ ಮತ್ತು ಮಗು

October 22, 2009 · Leave a Comment

ಮಡೋನಾ ಮತ್ತು ಮಗುವಿನ ಯಾವೊಂದು ಕಲೆಯೂ
ನಿಲುಕದಂತ ಚಿತ್ರವೊಂದರಲ್ಲಿ
ಕೆಲವೇ ಕ್ಷಣಗಳಲ್ಲಿ ಮರೆಯಬೇಕಿರುವ ತನ್ನ
ಕಂದನ ಕುರಿತ ತಾಯಿಯೊಬ್ಬಳ ವಾತ್ಸಲ್ಯ.

ಬೇಧಿಯಿಂದ ಬಳಲುವ ಕುಂಡೆ ತೊಳೆಯದ ಮಕ್ಕಳ ವಾಸನೆ
ಗಾಳಿ ತುಂಬಿತ್ತು;
ತಮ್ಮ ನಿತ್ರಾಣ ಪಕ್ಕೆಲುಬು, ಬತ್ತಿದ ಅಂಡು,
ಕಂಗಾಲು ಹೊಟ್ಟೆಯ ಹೊತ್ತು ಎತ್ತಲಾರದ ಹೆಜ್ಜೆ
ಇಡುತ್ತ ಸಾಗಿದ್ದರು.
ಅಲ್ಲಿಯ ಹೆಚ್ಚುಪಾಲು ತಾಯಂದಿರು
ಭರವಸೆ ತೊರೆದು ಮಕ್ಕಳಾರೈಕೆ ಬಿಟ್ಟಿದ್ದರೂ,
ಇವಳಲ್ಲ. ಹಲ್ಲುಗಳ ನಡುವೆ ಒಂದು ಪ್ರೇತ ನಗೆಯಿತ್ತು,
ಕಣ್ಣಲ್ಲಿ ತಾಯಿಹೆಮ್ಮೆಯ ಪ್ರೇತಕಳೆ,
ಮಗನ ತಲೆಮೇಲೆ ಅಳಿದುಳಿದ, ಧೂಳು ಮೆತ್ತಿದ ಕೂದಲು ಬಾಚುತ್ತ
- ಕಣ್ಣಲ್ಲೇ ನಗುತ್ತ -
ಬೈತಲೆ ತೆಗೆದು ಒಪ್ಪಮಾಡುತ್ತ…

ಇನ್ನಾವುದೋ ದಿನದ ಜೀವನದಲ್ಲಿ
ಇದೊಂದು ಅವನ ಬೆಳಗಿನ ತಿಂಡಿಯಂತೆ ಶಾಲೆಯ ಮುಂಚಿನ
ಸಾಧಾರಣ ದೈನಂದಿನ ಕ್ರಿಯೆಯಾಗಬಹುದಿತ್ತು.

ಈಗವಳು,
ಚಿಕ್ಕ ಗೋರಿಯ ಮೇಲೆ ಹೂ ಸುರಿದಂತೆ
ಇಲ್ಲಿ ತೊಡಗಿಕೊಂಡಿದ್ದಳು.

——– ಚಿನುವಾ ಅಚೀಬೆ (Refugee Mother and Child)

→ Leave a CommentCategories: ಅನುವಾದ · ಕವಿತೆ
Tagged: , , , ,

ಗೆಬ್ರಿಯೆಲಾ ಮಿಸ್ತ್ರಲ್ ಕವನಗಳು

October 9, 2009 · Leave a Comment


ಪುಟ್ಟ ಪಾದಗಳು

ಮಗುವೊಂದರ ಪುಟ್ಟ ಪಾದಗಳು

ನೀಲಿ, ಥಂಡಿಯಿಂದ ನೀಲಿಯಾಗಿವೆ;

ಹೇಗವರು ನಿನ್ನನ್ನು ಕಂಡರೂ ರಕ್ಷಿಸದೇ ಇರುವರು,

ಓ ದೇವರೇ!

ಕಲ್ಲು ಹರಳುಗಳಿಂದ ಎಲ್ಲೆಡೆ ಚುಚ್ಚಿಕೊಂಡ

ಪುಟಾಣಿ ಗಾಯಾಳು ಪಾದಗಳು

ಹಿಮ ಹಾಗೂ ಕೆಸರಿಂದ ನೋವಿಗೀಡಾಗಿವೆ.

ಮನುಷ್ಯ ತನ್ನ ಕುರುಡುತನದಲ್ಲಿ ಕಡೆಗಣಿಸಿದ್ದಾನೆ

ನೀನು ಕಾಲೂರಿದಲ್ಲಿ ಅರಳುವ

ಬೆಳಕಿನ ಉಜ್ವಲ ಹೂಗುಚ್ಚಗಳನ್ನು;

ನಿನ್ನ ರಕ್ತಸೂಸುವ ಪಾದಬಿದ್ದಲ್ಲಿ

ಸುಗಂಧಿತ ಗೆಡ್ಡೆಹೂವುಗಳು ಬೆಳೆಯುತ್ತವೆಂಬುದನ್ನು.

ನೀನು ಹೇಗೂ ಬೀದಿಗಳಲ್ಲಿ

ನೇರವಾಗಿಯೇ ನಡೆಯುವುದರಿಂದ

ನೀನು ನಿರ್ದೋಷಿ, ಧೈರ್ಯಶಾಲಿ.

ಮಗುವಿನ ಪುಟಾಣಿ ಪಾದಗಳು;

ನರಳಿರುವ ಸಣ್ಣ ರತ್ನದ್ವಯಗಳು;

ಅದು ಹೇಗೆ ಜನರು ಸಾಗಿದ್ದಾರೆ ಕಣ್ಣಿಗೇ ಹಾಕಿಕೊಳ್ಳದೇ!

→ Leave a CommentCategories: ಅನುವಾದ · ಕವಿತೆ
Tagged:

ಮರಾಠಿ ಕವಿತೆ: ಅರುಣ ಕೊಲಾಟ್ಕರ್

October 8, 2009 · Leave a Comment

ಒಂದು ಹಳೆಯ ಸೈಕಲ್ಲ ಟಾಯರು

* ಅರುಣ ಕೊಲಾಟ್ಕರ್

from: google images

from: google images

೧.

ಒಂದು ಹಳೆಯ ಸೈಕಲ್ಲ ಟಾಯರು

ನಾನಿರಬಹುದು,

ಗಾಲಿಯಿಂದ ಸುಲಿದಿಟ್ಟ ಬೋಳು

ಕೊನೆಯಿರದ ಹಾವುಮೀನು,

ಥರಥರ ನಡುಗುವ ಸೊನ್ನೆ,

ಸ್ನಾಯುವಾತದ ಗೋಳ,

ಅಂದಮಾತ್ರಕ್ಕೆ ಅರ್ಥ

ತಯಾರಾದೆನೆಂದಲ್ಲ

ಚಾವಣಿಯ ತುದಿಯಲ್ಲಿ

ನೇತುಬೀಳಲು

ಅಥವಾ ಒದ್ದೆ ಅಟ್ಟದಲ್ಲಿ

ಬಿದ್ದು ಕೊಳೆಯಲು

ಸಹವಾಸದಲ್ಲಿರುವಂತೆ,

ಮೂರು ಕಾಲಿನ ಕುರ್ಚಿ

ಕಿವಿಯಿಂದ ಕಿವಿಯಗಲಕ್ಕೆ ಹರಕು ನಗುವ

ಎಡಗಾಲಿನ ಷೂ

ಹಾಗೂ ಹೊಲಸು ವರ್ತುಲದಂತ

ನನ್ನ ತುಲ್ಲಿನಲ್ಲಿ

ಸಿಕ್ಕಿಬಿದ್ದಿರುವ

ಅನಾಥ ಬಸವನ ಹುಳು.

→ Leave a CommentCategories: ಅನುವಾದ · ಕವಿತೆ · ಮರಾಠಿ
Tagged: , ,

Hello world!

October 8, 2009 · 1 Comment

Welcome to WordPress.com. This is your first post. Edit or delete it and start blogging!

→ 1 CommentCategories: Uncategorized